ನಿತ್ಯ ಬೆಳಗಾದರೆ ಸಾಕು ಸಮೂಹ ಮಾಧ್ಯಮಗಳಲ್ಲಿ ‘ಅಯೋಗ್ಯ, ನೀಚ, ಬಚ್ಚಾ, ಚೇಲಾ, ಖಬರಗೇಡಿ, ಹರಾಮಖೋರ, ಹುಚ್ಚ, ತಲೆತಿರುಕ’ ಮುಂತಾದ ಬಯ್ಗುಳದ ನುಡಿಗಳನ್ನು ರಾಜಕೀಯ ಹಾಗೂ ಜಾತಿ–ಧರ್ಮಗಳ ನೆಲೆಯಲ್ಲಿ ಸಕ್ರಿಯರಾಗಿ ತೊಡಗಿರುವ ವ್ಯಕ್ತಿಗಳು ಪರಸ್ಪರ ಬಳಸುತ್ತಿರುವುದನ್ನು ಕೇಳುತ್ತಿದ್ದೇವೆ. ಬಯ್ಯುವುದನ್ನಾಗಲೀ ಬಯ್ಗುಳಗಳನ್ನಾಗಲೀ ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ಅವು ನಿತ್ಯಜೀವನದ ಮಾತುಕತೆಗಳಲ್ಲಿ ವ್ಯಕ್ತಿಗಳ ಮನದೊಳಗಿನ ಕೋಪ, ತಾಪ, ಹತಾಶೆ, ಆತಂಕ, ಸೇಡಿನ ಭಾವನೆಗಳನ್ನು ಹೊರಚೆಲ್ಲುವ ಸಾಧನಗಳಾಗಿವೆ. ಇದರಿಂದ ಬಯ್ದವನಿಗೆ ಒಂದು ಬಗೆಯ ನಿರಾಳತೆಯುಂಟಾಗುತ್ತದೆ. ಬೈಸಿಕೊಂಡವನು ನೊಂದು ಇಲ್ಲವೇ ಕೆರಳಿ, ತಾನು ಕೇಳಿದ ಬಯ್ಗುಳಕ್ಕಿಂತ ಎರಡು ಪಟ್ಟು ಪ್ರಬಲವಾಗಿರುವ ಬಯ್ಗುಳವನ್ನು ಬಳಸಿ ಸಮಾಧಾನಪಟ್ಟುಕೊಳ್ಳುತ್ತಾನೆ.