‘ಬಿಹಾರದಲ್ಲಿ ಕಾಡಿದ ಚಿತ್ರಗಳು.. ಪಾತ್ರಗಳು...’ ಲೇಖನದಲ್ಲಿ ಬರೆದಿರುವಂತೆ (ಪ್ರ.ವಾ., ಜುಲೈ 12) ಪದ್ಮರಾಜ ದಂಡಾವತಿ ಅವರಿಗೆ ಆಗಿರುವಂಥ ಅನುಭವ ನನಗೂ ಆಗಿದೆ.
ಉತ್ತರ ಭಾರತ ಯಾತ್ರೆ ಕೈಗೊಂಡಿದ್ದಾಗ ವಿಶ್ರಾಂತಿಗಾಗಿ ಬಿಹಾರದ ಯಾವುದೋ ಧಾಬಾ ಒಂದಕ್ಕೆ ತೆರಳಲು ಯಾತ್ರಿಗಳು ಬಸ್ಸಿನಿಂದ ಇಳಿದರು. ಹರಕಲು ಬಟ್ಟೆ ಧರಿಸಿದ್ದ ಒಂದು ಹುಡುಗಿ ಕೈ ಮುಂದೆ ಮಾಡಿದಾಗ ನಮ್ಮಲ್ಲಿ ಯಾರೋ ಒಬ್ಬರು ಅವಳಿಗೆ 10 ರೂಪಾಯಿ ನೀಡಿದ್ದರು. ವಿಶ್ರಾಂತಿಯ ನಂತರ ನಾವು ಪುನಃ ಬಸ್ ಹತ್ತುವ ಸಮಯದಲ್ಲಿ ಅಲ್ಲಿ ಜೇನಿನ ಪಡೆಯಂತೆ 12 ವರ್ಷದ ಒಳಗಿನ 20– 25 ಹುಡುಗರ ದಂಡೇ ನೆರೆದಿತ್ತು. ಚಿಂದಿ ಆಯುವ ಹುಡುಗರಂತಿದ್ದ ಅವರು, 300 ಮೀಟರ್ ದೂರದಲ್ಲಿದ್ದ, ಸರ್ಕಾರದ ಯೋಜನೆಯಡಿ ಹುಟ್ಟಿದ ಕಾಲೊನಿಯೊಂದಕ್ಕೆ ಸೇರಿದವರಾಗಿದ್ದರು. ಅವರೆಲ್ಲ ನಮ್ಮನ್ನು ಕಿತ್ತು ತಿನ್ನುವಂತೆ ಬೆನ್ನುಬಿದ್ದರು. ನಮ್ಮನ್ನು ಕಾಪಾಡಲು ಧಾಬಾದ ವ್ಯವಸ್ಥಾಪಕನೇ ಬಡಿಗೆ ಹಿಡಿದು ಬರಬೇಕಾಯಿತು.
ಕಣ್ಣಿನ ಶಕ್ತಿ ಇರುವವರೆಗೂ ನೋಡಬಹುದಾದಂಥ ಬಯಲು ಅದು. ಸುತ್ತಲೂ, ದೃಷ್ಟಿ ಹರಿಸಿದಷ್ಟೂ ಹಸಿರೇ ಕಾಣುತ್ತದೆ. ಇಂಥ ಸಮೃದ್ಧವಾದ ಹಸಿರಿನ ಈ ಪ್ರಸ್ಥಭೂಮಿಯಲ್ಲಿ ಹೀಗೇಕೆ ಕಿತ್ತುತಿನ್ನುವ ಬಡತನ?