ಬಿಬಿಎಂಪಿ ಹೊಸದಾಗಿ ಆರಂಭಿಸಲಿರುವ ಕೇಂದ್ರೀಕೃತ ಕಂಟ್ರೋಲ್ ರೂಮ್ ಸೇವೆಯಲ್ಲಿ ಕನ್ನಡ, ಇಂಗ್ಲಿಷ್ ಜೊತೆಗೆ ಹಿಂದಿಯಲ್ಲೂ ಮಾಹಿತಿ ಸೇವೆ ನೀಡಲು ಮುಂದಾಗಿದೆ. ಬಿಬಿಎಂಪಿ ಆಡಳಿತದಲ್ಲಿ ಹೀಗೆ ಮೂರನೇ ಭಾಷೆ ಸೇವೆ ಸೇರಿಸಿರುವುದು ರೂಢಿಯಲ್ಲಿರುವ ಆಡಳಿತ ಭಾಷಾ ನಿಯಮದ ಉಲ್ಲಂಘನೆ ಅಲ್ಲವೇ?
ಹಿಂದಿ ಭಾಷಿಕರನ್ನು ಕನ್ನಡದ ಮುಖ್ಯವಾಹಿನಿಯಿಂದ ದೂರವೇ ಉಳಿಸುವ ಪ್ರಯತ್ನ ಇದು. ಅಷ್ಟಕ್ಕೂ ಬೆಂಗಳೂರಿನಲ್ಲಿ ವಲಸಿಗರೆಂದರೆ ಕೇವಲ ಹಿಂದಿ ಭಾಷಿಕರಷ್ಟೇ ಅಲ್ಲ, ತಮಿಳು, ತೆಲುಗು, ಮರಾಠಿಯವರೂ ಇದ್ದಾರೆ. ಹಿಂದಿ ಬಾರದ ಇವರು ಕನ್ನಡ ಅಥವಾ ಇಂಗ್ಲಿಷಿನಲ್ಲಿ ಸೇವೆ ಪಡೆದು ಸ್ಥಳೀಯ ಮುಖ್ಯವಾಹಿನಿಯೊಂದಿಗೆ ಬೆರೆಯುತ್ತಿರುವಾಗ ಹಿಂದಿ ಭಾಷಿಕರಿಗೆ ಮಾತ್ರ ಏಕೆ ಹೆಚ್ಚಿನ ಸೌಲಭ್ಯ?
ಒಂದು ಪ್ರದೇಶಕ್ಕೆ ವಲಸೆ ಬರುವ ಜನ ಅಲ್ಲಿನ ನೆಲದ ಭಾಷೆ ಕಲಿತು ಅಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆತು ಬಾಳುವುದು ಜಗತ್ತಿನ ನಿಯಮ. ಶಾಂತಿ, ಸೌಹಾರ್ದಕ್ಕೂ ಇದೇ ಸರಿಯಾದ ದಾರಿ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಬೇಕಾದ ರಾಜ್ಯ ಸರ್ಕಾರವೇ ಹಿಂದಿ ಹೇರಿಕೆಗೆ ಅವಕಾಶ ನೀಡುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ.