ಪಿಇಎಸ್ ಸ್ಕೂಲ್ ಆಫ್ ಎಂಜಿನಿಯರಿಂಗ್ ಕಾಲೇಜು ಎಲೆಕ್ಟ್ರಾನಿಕ್ಸ್ ಸಿಟಿ ಬಸ್ ನಿಲ್ದಾಣದಿಂದ ಒಂದು ಕಿಲೋಮೀಟರ್ ದೂರದಲ್ಲಿದೆ. ಗೇಟ್ನಿಂದ ಕಾಲೇಜಿಗೆ ಅರ್ಧ ಕಿಮಿ ಒಳಗೆ ಹೋಗಬೇಕು. ಇಲ್ಲಿ ಸರಿಯಾದ ಬಸ್ ಸೌಕರ್ಯ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ, ನೌಕರರಿಗೆ ಮತ್ತು ಇತರರಿಗೆ ಬಹಳ ತೊಂದರೆಯಾಗುತ್ತಿದೆ.
ಕಾಲೇಜು ಗೇಟ್ ಬಳಿ ಎರಡೂ ಕಡೆ ಸರ್ವೀಸ್ ರೋಡ್ ಇದೆ. ಈ ಜಾಗದಲ್ಲಿ ಬಸ್ ತಂಗುದಾಣ ಮತ್ತು ಸಿಗ್ನಲ್ ಅಳವಡಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಸಂಬಂಧಪಟ್ಟವರು ಈ ವಿಷಯದಲ್ಲಿ ಗಮನ ನೀಡಬೇಕೆಂದು ಕೋರಿಕೆ.
- ವಸುಂಧರಾ ರಾವ್
ಏಕೀ ತಾತ್ಸಾರ?
ಸಾರಿಗೆ ಸಚಿವರು ಅನೇಕ ಯೋಜನೆ ಪ್ರಕಟಿಸುತ್ತಾರೆ. ಆದರೆ ಅದರಲ್ಲಿ ಸಮರ್ಪಕವಾಗಿ ಜಾರಿಗೆ ಬರುವುದು ಕಡಿಮೆ. ಅಧಿಕಾರಿಗಳಿಗಂತೂ ಪ್ರಯಾಣಿಕರ ಬವಣೆ ಬಗ್ಗೆ ಎಲ್ಲಿಲ್ಲದ ನಿರ್ಲಕ್ಷ್ಯ.
ಉದಾಹರಣೆಗೆ ಇಸ್ರೊದಿಂದ ನಾಗರಬಾವಿಗೆ ಬಸ್ಸು ಇತ್ತು. ವಿದ್ಯಾರಣ್ಯಪುರ, ಚಾಮರಾಜಪೇಟೆ ಮಾರ್ಗವಾಗಿ ಅನೇಕ ಬಸ್ ಸಂಚರಿಸುತ್ತಿದ್ದವು. ಅವೆಲ್ಲ ಈಗ ನಿಂತಿವೆ.ಮಹಿಳಾ ವಿಶೇಷ, ಪಾಸುದಾರರಿಗೆ ವಿಶೇಷ ವಾಹನ ಇತ್ತು.
ಅದೂ ಸ್ಥಗಿತಗೊಂಡಿದೆ. ಅಟಲ್ ಸಾರಿಗೆಯಲ್ಲಿ ಆಸನ ಇಲ್ಲ. ದೊಡ್ಡಿಯಲ್ಲಿ ಕುಳಿತ ಹಾಗೆ ತೂರಬೇಕು. ಯಾವ ಆಸರೆ ಇಲ್ಲ. ಬಿದ್ದರೆ ಅನಾಹುತ ಗ್ಯಾರಂಟಿ. ಬಸ್ ನಿಲುಗಡೆಗಳ ಹತ್ತಿರ ಪ್ರಯಾಣಿಕರು ದಾಟಲು ಸಿಗ್ನಲ್ ಹಾಕಬೇಕು. ವಸಂತಪುರದ ಪೈಪ್ಲೈನ್ನಲ್ಲಿ ಸಿಗ್ನಲ್ ನಿಲ್ದಾಣ ಬೇಕು.
-ನಿತ್ಯ ಪ್ರಯಾಣಿಕ