ಈಗಾಗಲೇ ನಾನಾ ಬಗೆಯ ಮಾಲಿನ್ಯಗಳಿಂದ ನಲುಗುತ್ತಿರುವ ಬೆಂಗಳೂರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರು ಇನ್ನಷ್ಟು ಮಾಲಿನ್ಯದ ಬೃಹತ್ ಕೊಡುಗೆಯನ್ನೇ ನೀಡುತ್ತಿದ್ದಾರೆ.
ಇತ್ತೀಚೆಗೆ ಬಿಬಿಎಂಪಿ ಕಸದ ಸಮಸ್ಯೆಯಿಂದ ಹೊರಬರುವ ನಿಟ್ಟಿನಲ್ಲಿ ಹೊಸ ತಂತ್ರವೊಂದನ್ನು ಅಳವಡಿಸಿಕೊಂಡಿದೆ ಎನಿಸುತ್ತದೆ. ಕಸ ಸಂಗ್ರಹಣೆ ಮಾಡುತ್ತಿದ್ದ ಸ್ಥಳಗಳಲ್ಲಿ ಸ್ಥಳೀಯರ ಒತ್ತಾಯ ಹಾಗೂ ಪ್ರತಿಭಟನೆಯಿಂದ ಬೇಸತ್ತ ಪಾಲಿಕೆ ನೌಕರರು ರಸ್ತೆ ಬದಿಗಳಲ್ಲೇ ಪ್ಲಾಸ್ಟಿಕ್ ಮತ್ತಿತರ ವಸ್ತುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಈ ಮೂಲಕ ಕಸ ಸಾಗಿಸುವ ತಮ್ಮ ಕೆಲಸವನ್ನು ಸುಲಭ ಮಾಡಿಕೊಂಡಿದ್ದಾರೆ.
ಆದರೆ ಇದರಿಂದ ನಗರದಲ್ಲಿ ವಾಸಿಸುವವರ ಗತಿ ಏನಾಗಬೇಕು? ಪ್ಲಾಸ್ಟಿಕ್ ಸುಡುವುದರಿಂದ ಹೊರಹೊಮ್ಮುವ ವಿಷಕಾರಿ ಅನಿಲಗಳು ಕ್ಯಾನ್ಸರ್ಕಾರಕ ಎಂದು ಸಂಶೋಧಕರು ಹೇಳುತ್ತಲೇ ಬಂದಿದ್ದಾರೆ. ಆದರೆ ನಾವು ಮಾತ್ರ ಪ್ಲಾಸ್ಟಿಕ್ ಬಳಕೆಯನ್ನೂ ನಿಲ್ಲಿಸಿಲ್ಲ ಮತ್ತು ಅವುಗಳನ್ನು ಸುಡುವುದಕ್ಕೂ ತಡೆ ಒಡ್ಡುತ್ತಿಲ್ಲ. ಬಿಬಿಎಂಪಿ ಇನ್ನಾದರೂ ಎಚ್ಚೆತ್ತುಕೊಂಡು, ಇದನ್ನು ತಡೆಯಲು ಕ್ರಮ ಕೈಗೊಳ್ಳಲಿ.