‘ಸಿದ್ಧಾಂತಕ್ಕೆ ಕಟ್ಟುಬಿದ್ದರೆ ಯಾವುದನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಲು ಆಗಲ್ಲ. ನಮಗೆ ಬೇಕಿರುವುದು ಎಡ ಇಲ್ಲವೆ ಬಲಪಂಥೀಯ ಸಿದ್ಧಾಂತವಲ್ಲ; ಬದಲಾಗಿ ನೈತಿಕವಾಗಿ ಭಯ ಹುಟ್ಟಿಸಬಲ್ಲ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೌಲ್ಯ’ ಎಂದು ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರು ‘ಪ್ರಜಾವಾಣಿ’ ಕಚೇರಿಗೆ ಭೇಟಿಕೊಟ್ಟಾಗ ಅಭಿಪ್ರಾಯಪಟ್ಟಿರುವುದು (ಪ್ರ.ವಾ. ಆ. ೫) ಅರ್ಥಪೂರ್ಣವಷ್ಟೇ ಅಲ್ಲದೆ, ತೆರೆದ ಮನಸ್ಸಿನ ಚಿಂತನೆಗೆ ಅವಕಾಶ ಮಾಡಿಕೊಡುವಂತಿದೆ.
‘ಸರಳ ಜೀವನ ಮತ್ತು ಉನ್ನತ ವಿಚಾರ’ ಎಂದು ಮಾತನಾಡುತ್ತಿದ್ದವರೆಲ್ಲರೂ ಅಧಿಕಾರದ ಗದ್ದುಗೆ ಏರಿದ ನಂತರ ಏನೇನಾಗಿ ಹೋದರೆಂಬುದು ಇತಿಹಾಸದಲ್ಲಿ ಮಾತ್ರವಲ್ಲ ವರ್ತಮಾನದಲ್ಲೂ ಕಾಣುತ್ತಿರುವ ನಗ್ನಸತ್ಯ. ಇಂತಹುದೊಂದು ಸಂದರ್ಭದಲ್ಲಿ ಭೈರಪ್ಪ ಅವರು ಸಿದ್ಧಾಂತಕ್ಕೂ, ಬದುಕಿಗೂ ಅಂತರವಿಲ್ಲದಂತೆ ಜೀವಿಸಿದ ಶಾಸ್ತ್ರಿಯವರನ್ನು ಉಲ್ಲೇಖಿಸಿರುವುದು ಔಚಿತ್ಯಪೂರ್ಣವಾಗಿದೆ.