ವಿಮರ್ಶಕ ಸುಮತೀಂದ್ರ ನಾಡಿಗ್ ಅವರು ‘ಕುವೆಂಪು ಒಳ್ಳೆಯ ಕವಿಯಾದರೂ ನಾಡಗೀತೆಯಾಗಿರುವ ಅವರ ಕವಿತೆ ಒಳ್ಳೆಯ ಕವಿತೆಯಲ್ಲ’ ಎಂದು ಹೇಳಿದ್ದಾರೆ (ಪ್ರ.ವಾ. ಡಿ. 2). ಸಾಹಿತಿ ಗಿರೀಶ ಕಾರ್ನಾಡ್ ಹೇಳಿಕೆ ಎಬ್ಬಿಸಿದ ವಿಮಾನ ನಿಲ್ದಾಣದ ಹೆಸರಿನ ವಿವಾದ ಈಗಷ್ಟೇ ತಿಳಿಯಾಗುತ್ತಿರುವ ಹೊತ್ತಿನಲ್ಲೇ, ನಾಡಿಗ್ ಅವರು ಈ ಮೂಲಕ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.
ನಾಡಗೀತೆಯನ್ನು ಅನುಷ್ಠಾನಗೊಳಿಸಿ 12 ವರ್ಷಗಳಾದ ಮೇಲೆ ಈ ರೀತಿ ಹೇಳುವುದು ಎಷ್ಟು ಸರಿ?
ನಾಡಗೀತೆಯ ಅನುಷ್ಠಾನದ ಸಮಯದಲ್ಲಿ ಇವರು ಎಲ್ಲಿ ಅಡಗಿದ್ದರು? ಇನ್ನು ಮುಂದಾದರೂ ನಮ್ಮ ಮಾರ್ಗದರ್ಶಕರಾದ ಹಿರಿಯರು ಮಾತನಾಡುವ ಮೊದಲು ಎಚ್ಚರ ವಹಿಸಲಿ. ಆರು ಕೋಟಿ ಕನ್ನಡ ಸಮುದಾಯವನ್ನು ಒಡೆಯುವ ಬದಲು ಒಂದುಗೂಡಿಸಲಿ.