ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಹೊರವಲಯದಲ್ಲಿ 25 ವರ್ಷಗಳ ಹಿಂದೆ ನೂರಾರು ಎಕರೆ ಜಾಗಗಳು ಹಾಳುಬಿದ್ದಿದ್ದವು. ಕ್ರಮೇಣ ಭೂಮಿಗೆ ಬೇಡಿಕೆ ಬರುತ್ತಿದ್ದಂತೆ ಜಮೀನುಗಳನ್ನು ಸಿಕ್ಕ ಹಣಕ್ಕೆ ಮಾರಾಟ ಮಾಡಿದ್ದರು (ಆಗ ಸಿಕ್ಕಿದ್ದೇ ದೊಡ್ಡ ಮೊತ್ತವಾಗಿತ್ತು). ಇದರಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಭೂಮಿಯೂ ಸೇರಿದೆ.
ಕೆಲವು ಹಣವಂತರು ಎಕರೆಗಟ್ಟಲೆ ಭೂಮಿ ಖರೀದಿಸಿ ಲೇಔಟ್ಗಳನ್ನು ಮಾಡಿ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದ್ದರು. ಲೇಔಟ್ಗಳಲ್ಲಿ ನಿವೇಶನ ಪಡೆದು, ಜೀವನವಿಡೀ ದುಡಿದು ಕೂಡಿಟ್ಟ ಹಣದಲ್ಲಿ ಮನೆ ಕಟ್ಟಿಕೊಂಡು ನೆಮ್ಮದಿಯಾಗಿದ್ದರು. ಆದರೆ ಈಗ ನಿವೇಶನಗಳ ಬೆಲೆ ಗಗನಮುಖಿಯಾಗಿದ್ದು,ಹಣದಾಸೆಗೆ ಹಿಂದೆ ತಾತ, ಮುತ್ತಾತ ಮಾರಿದ ಜಾಗವನ್ನು ಮೊಮ್ಮಕ್ಕಳು ಬಂದು ಕೇಳುವ ಪ್ರಕರಣಗಳು ಹೆಚ್ಚಾಗಿವೆ.
‘ಈ ಜಾಗದಲ್ಲಿ ನಮಗೆ ಹಕ್ಕಿದೆ. ಈಗಿನ ಬೆಲೆ ನೀಡಿದರೆ ಸುಮ್ಮನಿರುತ್ತೇವೆ. ಇಲ್ಲದಿದ್ದರೆ ಕೋರ್ಟ್ ಮೊರೆ ಹೋಗುತ್ತೇವೆ’ಎಂದು ಹೆದರಿಸುತ್ತಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ ಕಾನೂನು ತಿದ್ದುಪಡಿ ತಂದು ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ.