ಮಂಡ್ಯ ಜಿಲ್ಲೆ ಪಾಂಡವಪುರದ ರೈತ ನಿಂಗೇಗೌಡ ಸಾಲದ ಬಾಧೆ ತಾಳಲಾರದೆ ತಮ್ಮ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ ಅದಕ್ಕೇ ಹಾರಿಕೊಂಡಿರುವುದು ಅತ್ಯಂತ ನೋವಿನ ಸಂಗತಿ. ರೈತರಿಗೆ ಹೆಜ್ಜೆ ಹೆಜ್ಜೆಗೂ ತೊಂದರೆಗಳು ಕಾಡುತ್ತಿವೆ. ಬಿತ್ತನೆ ಬೀಜ, ರಸಗೊಬ್ಬರ, ಔಷಧಿ ಎಲ್ಲವೂ ಕಳಪೆ, ಕೂಲಿ ಮಾತ್ರ ದುಬಾರಿ, ಬೆಳೆದ ಬೆಳೆಗಳಿಗೆ ಬೆಲೆಯಿಲ್ಲ. ಈ ಸ್ಥಿತಿಯಲ್ಲಿ ಆರೇಳು ತಿಂಗಳಾದರೂ ಕಬ್ಬಿನ ಬಾಬ್ತು ಕೈ ಸೇರಿಲ್ಲ. ಹೀಗಾಗಿ ರೈತರು ಸಾಲದ ಶೂಲಕ್ಕೆ ಸಿಲುಕಿ ಸಾವಿಗೆ ಮೊರೆಹೋಗುತ್ತಿದ್ದಾರೆ. ಕ್ರಿಮಿಕೀಟಗಳನ್ನು ಸಾಯಿಸಲೊಲ್ಲದ ಔಷಧಿಗಳು ಬಡರೈತನನ್ನು ಸಾವಿನಂಚಿಗೆ ದೂಡಿವೆ.
ಹಳ್ಳಿಗಳು ಬದಲಾಗಿವೆ, ಇಲ್ಲಿ ಪಟ್ಟಣಗಳಂತೆ ಎಲ್ಲವೂ ಸಿಗುತ್ತಿದೆ. ಆದರೆ ರೈತನ ಬಾಳು ಹಸನಾಗುವ ಬದಲು ಮಸುಕಾಗುತ್ತಿದೆ. ಬೆಳೆ ಬೆಳೆಯಲು ಮಾರ್ಗದರ್ಶನವಿಲ್ಲ, ಬೆಳೆಗೆ ಸರಿಯಾದ ಬೆಲೆಯಿಲ್ಲ, ವಿಮೆಯಿಲ್ಲ. ಕೃಷಿ ಉತ್ತೇಜನಕ್ಕೆ ಸರ್ಕಾರದ ನೀತಿಗಳು ಮಾರಕವಾಗುತ್ತಿವೆ. ಸರ್ಕಾರ ಸ್ವಾವಲಂಬನೆಗೆ ಉತ್ತೇಜನ ನೀಡಿ ಜನರನ್ನು ದುಡಿಮೆಗೆ ಪ್ರೇರೇಪಿಸದ ಹೊರತು ದೇಶದ ಏಳ್ಗೆ ಸಾಧ್ಯವಿಲ್ಲ.