ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ರೈಲು ಪ್ರಯಾಣ ದರಗಳನ್ನು ಏರಿಸುವುದಿಲ್ಲವೆಂದು ಹೇಳಿದ್ದಾರೆ. ದರಗಳನ್ನು ನೇರವಾಗಿ ಏರಿಸದಿದ್ದರೂ ಮುಂಗಡ ಕಾಯ್ದಿರಿಸುವಿಕೆಯ ದರಗಳಲ್ಲಿ ತೀವ್ರ ಹೆಚ್ಚಳ ಮಾಡಿದ್ದಲ್ಲದೇ, ಕಾಯ್ದಿರಿಸಿದ ಸ್ಥಳವನ್ನು ರದ್ದುಗೊಳಿಸಿದಲ್ಲಿ ಕಡಿತವಾಗುವ ಶುಲ್ಕವೇನೂ ಕಡಿಮೆಯಾಗಿಲ್ಲ. ಸಾಮಾನ್ಯ ದರ್ಜೆಯ ಟಿಕೆಟ್ ಪಡೆದು ಪ್ರಯಾಣಿಸುವವರಿಗೆ ಇದರ ತೀವ್ರತೆ ಅರಿವಾಗುವುದಿಲ್ಲ. ಕಾಯ್ದಿರಿಸಿದ ಟಿಕೆಟ್ ಪಡೆದು ಪ್ರಯಾಣಿಸುವವರಿಗೆ ಇದರ ಹೊರೆ ಗೊತ್ತಾಗುತ್ತದೆ.
ಮೇಲ್ನೋಟಕ್ಕೆ ದರ ಏರಿಕೆಯಾಗದಂತೆ ಕಂಡು ಬಂದರೂ ಪರೋಕ್ಷವಾಗಿ ವಿವಿಧ ದರಗಳಲ್ಲಿ ಬೇಕಾದಷ್ಟು ಏರಿಕೆಯಾಗುತ್ತಲೇ ಇದೆ. ಸ್ಥಳ ಕಾಯ್ದಿರಿಸಿದ್ದನ್ನು ರದ್ದು ಮಾಡುವುದರಿಂದ ರೈಲ್ವೆಗೆ ನಷ್ಟ ಆಗುವುದಿಲ್ಲ. ಟಿಕೆಟ್ಗೆ ಬೇಡಿಕೆ ಇರುವುದರಿಂದ ಬೇರೊಬ್ಬರು ಪಡೆಯುತ್ತಾರೆ. ರದ್ದತಿ ಶುಲ್ಕವನ್ನು ಕಡಿಮೆಗೊಳಿಸಲಿ. ಕನಿಷ್ಠಪಕ್ಷ ಕಾಯ್ದಿರಿಸಿದ ಟಿಕೆಟನ್ನು ಹಿಂದಿನ, ಮುಂದಿನ ದಿನಗಳಿಗೆ ಬದಲಾಯಿಸಿಕೊಂಡಾಗಲಾದರೂ ರದ್ದುಪಡಿಸುವಿಕೆಯ ಶುಲ್ಕವನ್ನು ಆಕರಿಸದಿದ್ದಲ್ಲಿ ಉಪಕರಿಸಿದಂತಾಗುತ್ತದೆ.