ಉತ್ತರ ಪ್ರದೇಶದಲ್ಲಿ ಅಸ್ವಸ್ಥ ಮಗನನ್ನು ಹೆಗಲ ಮೇಲೆ ಹೊತ್ತು ಓಡಾಡಿದ ಅಪ್ಪ, ಒಡಿಶಾದಲ್ಲಿ ಪತ್ನಿಯ ಶವವನ್ನು ಹೊತ್ತುಕೊಂಡು ಹೋದ ಪತಿ, ವೃದ್ಧೆಯ ಶವದ ಕೈ ಕಾಲು ಮುರಿದು ಚೀಲದಲ್ಲಿ ಕಟ್ಟಿ ಹೊತ್ತೊಯ್ದದ್ದು ಈ ಎಲ್ಲವನ್ನೂ ನೊಡಿದರೆ ನಮ್ಮನ್ನಾಳುವ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಸ್ವಲ್ಪವಾದರೂ ಮರುಕ ಹುಟ್ಟುವುದಿಲ್ಲವೇ ಎನಿಸುತ್ತದೆ.
ಬಡವರಿಗೆ ತುರ್ತು ಚಿಕಿತ್ಸಾ ವಾಹನ ಮತ್ತು ಶವಸಾಗಣೆ ವಾಹನಗಳನ್ನು ಒದಗಿಸಬೇಕಾದುದು ಸರ್ಕಾರದ ಕರ್ತವ್ಯವಲ್ಲವೇ?
ಬೆಂಗಳೂರಿನ ‘ನಿಮ್ಹಾನ್ಸ್’ ಆಸ್ಪತ್ರೆಯ ಬಳಿ ತುರ್ತು ಚಿಕಿತ್ಸಾ ವಾಹನದ ದಂಧೆಯೇ ನಡೆಯುತ್ತದೆ. ಈ ವಾಹನಗಳನ್ನು ಬಳಸಲು ಅವರು ಹೇಳಿದಷ್ಟು ಬೆಲೆ ಕೊಡಲೇಬೇಕು.
ಅಲ್ಲದೆ ನಿಯಂತ್ರಣ ಸಾಧಿಸಿದವರ ಅನುಮತಿ ಇಲ್ಲದೆ ಬೇರೆ ಯಾವುದೇ ತುರ್ತು ಚಿಕಿತ್ಸಾ ವಾಹನ ಅಲ್ಲಿ ಪ್ರವೇಶಿಸುವಂತಿಲ್ಲ.
ರೋಗಿಗಳನ್ನು ಸ್ಥಳಾಂತರಿಸುವುದಿರಲಿ ಅಥವಾ ಶವ ಸಾಗಣೆಯೇ ಇರಲಿ ಇಲ್ಲಿ ಕರುಣೆಗೆ ಜಾಗವೇ ಇಲ್ಲ. ಆದರೂ ಕಾನೂನು ವ್ಯವಸ್ಥೆ ಕಣ್ಮುಚ್ಚಿ ಕುಳಿತಿದೆ.