ಹೂಡಿ ಗ್ರಾಮದ ಅಶ್ವತ್ಥಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅದರ ಮುಂದಿನ ರಸ್ತೆ, ರೈಲ್ವೆ ಗೇಟ್ನಿಂದಾಗಿ ಸದಾ ಉಂಟಾಗುವ ಟ್ರಾಫಿಕ್ ದಟ್ಟಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಶಾಲೆಯ ಅಕ್ಕಪಕ್ಕದಲ್ಲಿ ಎರಡು ರಸ್ತೆಗಳು ಹಾಗೂ ಸಮೀಪದಲ್ಲಿ ಒಂದು ರೈಲ್ವೆಗೇಟ್ ಇದೆ. ಇಲ್ಲಿ ದಿನನಿತ್ಯ ನೂರಾರು ವಾಹನಗಳು ಹಾಗೂ ಪಾದಚಾರಿಗಳು ಸಂಚರಿಸುತ್ತಿರುತ್ತವೆ. ಕೆಲವೊಮ್ಮೆ ರೈಲ್ವೆ ಗೇಟ್ ಮುಚ್ಚಿದರೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿ ಶಾಲೆಗೆ ಶಬ್ದಮಾಲಿನ್ಯದ ತೊಂದರೆ ತಪ್ಪಿದ್ದಲ್ಲ.
ಆದ್ದರಿಂದ ಬೆಳಿಗ್ಗೆ ಮತ್ತು ಸಾಯಂಕಾಲ ಇದಕ್ಕೆ ಸಂಬಂಧಪಟ್ಟ ಮಹದೇವಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಇತ್ತ ಗಮನಹರಿಸಿ ಒಬ್ಬ ಟ್ರಾಫಿಕ್ ಪೇದೆಯನ್ನು ಈ ಜಾಗದಲ್ಲಿ ನೇಮಿಸಿದರೆ ಅನುಕೂಲವಾಗುತ್ತದೆ.
-ನೊಂದ ಗ್ರಾಮಸ್ಥರು
ಮೂಲ ಸೌಕರ್ಯ ಒದಗಿಸಿ
ಬಿಡಿಎ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಬನಶಂಕರಿ 6ನೇ ಹಂತ 4ನೇ `ಟಿ~ ಬ್ಲಾಕ್ ಮುಂದುವರಿದ ಬಡಾವಣೆಯಲ್ಲಿ ಅನೇಕ ನಾಗರಿಕರು ನಿವೇಶನಗಳನ್ನು ಪಡೆದುಕೊಂಡಿದ್ದಾರೆ.
ಇದಾಗಿ ಏಳು ವರ್ಷಗಳೇ ಕಳೆದರೂ ಬಿಡಿಎ ಈ ಬಡಾವಣೆಯಲ್ಲಿ ಮೂಲಸೌಕರ್ಯಗಳನ್ನು ಜನರಿಗೆ ಕಲ್ಪಿಸಿಕೊಟ್ಟಿಲ್ಲ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ಮನೆ ನಿರ್ಮಿಸಿ ವಾಸ ಮಾಡುವುದು ಸಾಧ್ಯವೇ? ರಸ್ತೆ, ನೀರು, ವಿದ್ಯುತ್ ಸಂಪರ್ಕವನ್ನೂ ಒದಗಿಸಿಕೊಟ್ಟಿಲ್ಲ.