ಬರಿಗೈಯಲ್ಲಿ ಮ್ಯಾನ್ಹೋಲ್ ಸ್ವಚ್ಛಗೊಳಿಸಿದ ಕಾರ್ಮಿಕರ ಕಾರ್ಯ (ಪ್ರ.ವಾ. ಜೂನ್ ೨) ನಾಗರಿಕರ ಕಣ್ಣು ತೆರೆಸುವಂತಿದೆ. ಹೊಲಸು ಕಂಡರೆ ಮೂಗು ಮುಚ್ಚಿಕೊಂಡು ವ್ಯವಸ್ಥೆಗೆ ಹಿಡಿಶಾಪ ಹಾಕುವವರೇ ಬಹುತೇಕರು. ಅಂತಹುದರಲ್ಲಿ ದಾವಣಗೆರೆಯ ಅನಾಮಧೇಯ ಕಾರ್ಮಿಕರ ಕಾರ್ಯ ಪ್ರಶಂಸಾರ್ಹವಾದುದು.
ಚಿತ್ರ ನೋಡಿದವರಿಗೆ ಅದು ಮ್ಯಾನ್ಹೋಲ್ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ, ‘ಅಲ್ಲಿ ಮ್ಯಾನ್ಹೋಲ್ ಇಲ್ಲ, ರಸ್ತೆ ದುರಸ್ತಿಗಾಗಿ ಯುಜಿಡಿ ಬಂದ್ ಮಾಡಲಾಗಿದೆ. ನಿಮಗೆ ಯಾರೋ ದಾರಿ ತಪ್ಪಿಸುತ್ತಿರಬಹುದು’ ಎಂದು ನಗರಸಭೆ ಆಯುಕ್ತರು ಜಾರಿಕೊಳ್ಳಲು ಮುಂದಾಗಿದ್ದಾರೆ.
ಅದೇನಾದರೂ ಇದ್ದೀತು, ಆದರೆ ಅದೊಂದು ಹೊಲಸು ತುಂಬಿದ ಗುಂಡಿ ಎಂಬುದಂತೂ ಸುಳ್ಳಲ್ಲ. ತಮ್ಮ ಸಿಬ್ಬಂದಿ ಮಾಡಬೇಕಾದ ಕೆಲಸವನ್ನು ಸ್ವಪ್ರೇರಣೆ ಹಾಗೂ ಫಲಾಪೇಕ್ಷೆಯಿಲ್ಲದೆ ಮಾಡಿರುವ ಆ ಖಾಸಗಿ ಕಾರ್ಮಿಕರಿಗೆ ಧನ್ಯವಾದ ಹೇಳಬೇಕು. ಅದು ಬಿಟ್ಟು ಜಾಣ ಕುರುಡರಂತೆ ವರ್ತಿಸುವುದು ದುರದೃಷ್ಟಕರ. ಉಪಕಾರದ ಸ್ಮರಣೆ ಒಂದಿಷ್ಟಾದರೂ ಬೇಡವೆ?