ಹೈನುಗಾರಿಕೆಗೆ ಸಂಬಂಧಿಸಿದ ಎಚ್.ಕೆ.ಶರತ್ ಅವರ ಅಭಿಪ್ರಾಯಗಳಿಗೆ (ಸಂಗತ, ಮೇ 26) ಕೃಷ್ಣ ಶರ್ಮ ಅವರು ಉತ್ತರಿಸುತ್ತಾ (ಜೂನ್ 8) ‘ಹಸು ಕೊಡುವ ಹತ್ತಾರು ಲೀಟರ್ ಹಾಲನ್ನು ಕರುವಿಗೆ ಕುಡಿಸುವುದು ಅಸಾಧ್ಯ’ ಎಂದಿದ್ದಾರೆ.
ಹಾಲುಣಿಸುವ ಪ್ರತಿ ಜೀವಿಗೂ ಸೃಷ್ಟಿಯು ಅದರ ಮರಿಗಳಿಗೆ ಅಗತ್ಯವಿರುವಷ್ಟು ಹಾಲು ಉತ್ಪಾದಿಸುವ ವ್ಯವಸ್ಥೆ ಮಾಡಿದೆ. ಅಂತೆಯೇ ಹಸುವಿಗೂ ಕೂಡ. ಸೃಷ್ಟಿಯ ಮೂಲ (ದೇಸಿ) ಹಸುಗಳನ್ನು ಗಮನಿಸಿದರೆ, ಅವು 2-5 ಲೀಟರ್ ಹಾಲು ಕೊಡುತ್ತವೆ.
ಅಷ್ಟು ಹಾಲು ಅವುಗಳ ಮರಿಗಳಿಗೆ ಅಗತ್ಯ. ಆದರೆ ಮನುಷ್ಯ ಹಸುವಿನ ಹಾಲು ಕುಡಿಯುವ (ಕದಿಯುವ?) ತಪ್ಪು ದಾರಿ ಹಿಡಿದ ಮೇಲೆ, ತನ್ನ ಲಾಭಕ್ಕಾಗಿ ಮೂಲ ಹಸುವಿನ ವಿವಿಧ ತಳಿಗಳನ್ನು ಅಭಿವೃದ್ಧಿಪಡಿಸಿದ. ಅವು ತಮ್ಮ ಮರಿಗಳಿಗೆ ಅಗತ್ಯವಿರುವುದಕ್ಕಿಂತ ಹತ್ತಾರು ಲೀಟರ್ ಜಾಸ್ತಿ ಹಾಲು ಕೊಡುವಂತೆ ಮಾಡಿದ್ದು ಮನುಷ್ಯನೇ ಹೊರತು ಸೃಷ್ಟಿಯಲ್ಲ.
ವಿಜ್ಞಾನ ಮತ್ತು ಸಾಮಾನ್ಯ ಜ್ಞಾನದಿಂದ ತಿಳಿದು ಬಂದಿರುವುದೇನೆಂದರೆ, ಪ್ರತಿ ಪ್ರಾಣಿಯ ಮೊಲೆ ಹಾಲು ಆ ಪ್ರಾಣಿ ವರ್ಗದ ಮರಿಗಳ ಬೆಳವಣಿಗೆಗೆ ಸೂಕ್ತವಾಗುವಂತೆ ಸಂಯೋಜನೆ ಹೊಂದಿರುತ್ತದೆ.
ಅದೂ ಅಲ್ಲದೆ, ಮೊಲೆ ಹಾಲಿನ ಅಗತ್ಯ ಪ್ರತಿ ಜೀವಿಗೂ ಅದರ ಬಾಲ್ಯಾವಸ್ಥೆ ಕಳೆಯುವವರೆಗೆ ಮಾತ್ರ ಎಂಬುದು ಸೃಷ್ಟಿಯಲ್ಲಿ ಎಲ್ಲೆಡೆ ಕಾಣಸಿಗುತ್ತದೆ. ಸೃಷ್ಟಿ ನಿಯಮ ಧಿಕ್ಕರಿಸಿ, ಮತ್ತೊಂದು ಪ್ರಾಣಿಯನ್ನು ಬಂಧನದಲ್ಲಿರಿಸಿ, ಅಸಂಬದ್ಧ ಆಹಾರ ಉಣಿಸಿ, ರೋಗರುಜಿನಗಳಿಗೆ ತುತ್ತು ಮಾಡುವುದು, ಅದರ ಹಾಲು ಕದಿಯುವುದು ದೇವರನ್ನು ಮತ್ತು ಅವನ ಸೃಷ್ಟಿಯನ್ನು ಗೌರವಿಸುವವರು ಮಾಡುವ ಕೆಲಸವಲ್ಲ ಎಂದೆನಿಸುತ್ತದೆ.
ಶರತ್ ಅವರ ಹೈನುಗಾರಿಕೆಯ ಅನುಭವದ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು, ಸತ್ಯದ ಬಗ್ಗೆ ಸಮಂಜಸವಾಗಿ ಅರ್ಥೈಸುವುದರ ಕಡೆ ಗಮನಹರಿಸಿದರೆ ಒಂದೇ ನೆಲೆಗಟ್ಟಿನಲ್ಲಿ ಸತ್ಯವನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ.
ಮನುಷ್ಯ, ಹೈನುಗಾರಿಕೆ ಮಾಡುತ್ತಿರುವುದು ಹೈನುಗಳ ಉದ್ಧಾರಕ್ಕಲ್ಲ, ತನ್ನ ಉದ್ಧಾರಕ್ಕೆ ಎಂಬುದು ಜಗತ್ತಿಗೇ ತಿಳಿದಿರುವ ವಿಚಾರ. ಹಾಲಿನ ವಿಜ್ಞಾನ ಅರಿತುಕೊಳ್ಳುವ ಆಸಕ್ತಿಯಿದ್ದವರು ಡಾ. ಎನ್.ಕೆ.ಶರ್ಮ ಅವರ ‘ಮಿಲ್ಕ್–ಎ ಸೈಲೆಂಟ್ ಕಿಲ್ಲರ್’ ಎನ್ನುವ ಪುಸ್ತಕ ಓದಿದರೆ ಹಾಲಿನ ಬಗೆಗಿನ ಎಲ್ಲಾ ಮೂಢನಂಬಿಕೆಗಳು ದೂರವಾಗಿ ಆಹಾರ ವಿಜ್ಞಾನದ ಸತ್ಯ ದರ್ಶನವಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.