ಇವರೆಲ್ಲರೂ ದೇಶದ ವಾಸ್ತವ ಸ್ಥಿತಿಗೆ ಕಣ್ಣು ಮುಚ್ಚಿರುವಂತೆ ಕಾಣುತ್ತದೆ. ಇಲ್ಲಿ ಈಗಿರುವ ಮಕ್ಕಳಿಗೇ ‘ಹೊಟ್ಟೆಗಿದ್ದರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಹೊಟ್ಟೆಗಿಲ್ಲ’ ಎಂಬ ಸ್ಥಿತಿ. ಲಕ್ಷಾಂತರ ಮಕ್ಕಳು ಮಹಾನಗರಗಳ ಕೊಳೆಗೇರಿಗಳಲ್ಲಿದ್ದು, ಚಿಂದಿ ಆರಿಸುವ ಕರಾಳ ದೃಶ್ಯ ಇವರ ಕಣ್ಣಿಗೆ ಬಿದ್ದಂತಿಲ್ಲ. ಯುನಿಸೆಫ್ ವರದಿ ಪ್ರಕಾರ, ದೆಹಲಿಯಲ್ಲಿ ಮನೆಯಿಲ್ಲದೆ ಬೀದಿಗೆ ಬಿದ್ದ ಮಕ್ಕಳ ಸಂಖ್ಯೆ ಒಂದು ಲಕ್ಷ. ಇದೇ ರೀತಿ ಪ್ರತಿರಾಜ್ಯ ರಾಜಧಾನಿಗಳಲ್ಲಿ ಲಕ್ಷೋಪಲಕ್ಷ ಮಕ್ಕಳು ಬೀದಿಗೆ ಬಿದ್ದು ಚಳಿ, ಮಳೆ, ಬಿಸಿಲುಗಳಿಗೆ ಮೈಯೊಡ್ಡಿ, ಚಿಂದಿ ಆರಿಸಿ ಜೀವ ಹಿಡಿದು ಬದುಕುತ್ತಿವೆ, ಕೆಲವು ಸಾಯುತ್ತಿವೆ. ಇದೆಲ್ಲ ನೋಡಿದಾಗ ‘ಇರುವ ಮಕ್ಕಳಿಗೆ ಎಣ್ಣೆಯಿಲ್ಲ, ಬೆಣ್ಣೆಯಿಲ್ಲ ಮತ್ತೇಕೆ ಮಕ್ಕಳು!’ ಎಂಬ ಪ್ರಶ್ನೆ ಎದುರಾಗುತ್ತದೆ. ಹೆಚ್ಚು ಮಕ್ಕಳನ್ನು ಹುಟ್ಟಿಸುವಂತೆ ಪ್ರಚೋದಿಸುವವರೆಲ್ಲಾ ಆ ಮಕ್ಕಳ ಲಾಲನೆ, ಪಾಲನೆ ಮಾಡಿ ಸಾಕುವರೇನು?