ಪಂಡಿತ ಪಾಮರರೆನ್ನದೆ ಎಲ್ಲರೂ ‘ಧರ್ಮ ನಿರಪೇಕ್ಷ’, ‘ಧರ್ಮಾಂಧತೆ’ ಇತ್ಯಾದಿ ಶಬ್ದಗಳನ್ನು ಬಳಸುತ್ತಿದ್ದಾರೆ. ದಯವಿಟ್ಟು ಬಳಸಬೇಡಿ. ಮಾಧ್ಯಮಗಳೂ ಹಾಗೇ ಬರೆಯುತ್ತಿವೆ. ‘ಮತ’ಗಳು ಅನೇಕ, ‘ಧರ್ಮ’ವು ಏಕ. ಮತಗಳಿಗೆ ಸ್ಥಾಪಕರು, ಕರ್ತೃಗಳು ಇದ್ದಾರೆ. ಆದರೆ ಧರ್ಮಕ್ಕೆ ಯಾರೂ ಇಲ್ಲ. ಧರ್ಮ ಮಣ್ಣು ಇದ್ದಂತೆ, ಮತಗಳು ಮಡಕೆ ಕುಡಿಕೆ ಇತ್ಯಾದಿ ನಾನಾ ನಾಮ ರೂಪಗಳನ್ನು ಹೊಂದಿವೆ. ‘ನಾವು ಧರ್ಮ ಎಂಬ ಶಬ್ದವನ್ನು ‘ಮತ’ ಎಂಬ ಅರ್ಥದಲ್ಲೇ ಹೇಳುತ್ತಿರುವುದು’ ಎನ್ನುವುದೂ ಒಳ್ಳೆಯದಲ್ಲ.
ಮತಗಳಲ್ಲಿ ಮೌಢ್ಯ, ಹಿಂಸೆ ತುಂಬಿಕೊಂಡಿದೆ. ಧರ್ಮದಲ್ಲಿ ಅಂತಹದ್ದು ಇರಲು ಸಾಧ್ಯವೇ ಇಲ್ಲ. ಮತಗ್ರಂಥಗಳಲ್ಲಿ ಇತಿಹಾಸದ, ಸಾಮಾಜಿಕದ, ಸ್ವಾರ್ಥದ, ಅಪಾಯದ ಅಂಶಗಳೆಲ್ಲ ತುಂಬಿಕೊಂಡಿವೆ. ‘ಮತಗಳು’ ಎಂದರೆ ಸಹಜ, ‘ಧರ್ಮಗಳು’ ಎಂದರೆ ಬಿಸಿಲುಗಳು, ವಾಯುಗಳು, ನೀರುಗಳು ಎಂದಂತೆ ವಿಚಿತ್ರ. ಮತಗಳು ಇಲ್ಲದಿದ್ದರೂ ಮನುಷ್ಯ ಬದುಕಬಹುದು, ಧರ್ಮವಿಲ್ಲದೆ ಸಾಧ್ಯವಿಲ್ಲ. ಗುಡಿ, ಮಸೀದಿ, ಚರ್ಚು ಇತ್ಯಾದಿಗಳಿಗೆ ಹೋಗುವುದು ಮಾಡುವುದು ಇತ್ಯಾದಿಗಳು ಮತಾಚರಣೆಯೇ ವಿನಾ ಧರ್ಮಾಚರಣೆಯಲ್ಲ. ಅವರನ್ನು ಸಾರಾಸಗಟು ಧಾರ್ಮಿಕರೆನ್ನುವುದು ತಪ್ಪಾಗುತ್ತದೆ.
ರಿಲಿಜನ್ ಎನ್ನುವುದು ಮತವೇ ವಿನಾ ‘ಧರ್ಮ’ ಅಲ್ಲ. ಮಿಲಿಯಗಟ್ಟಳೆ ಗ್ರಂಥಗಳು ವಿಶ್ಲೇಷಿಸುವ ‘ಧರ್ಮದ’ ಸ್ವರೂಪವನ್ನು ಬಸವಣ್ಣನವರ ಏಳೇ ಏಳು ಶಬ್ದಗಳು ತಿಳಿಸಿವೆ ನೋಡಿ– ಕಳಬೇಡ; ಕೊಲಬೇಡ; ಹುಸಿಯ ನುಡಿಯಲು ಬೇಡ; ಮುನಿಯಬೇಡ; ತನ್ನ ಬಣ್ಣಿಸಬೇಡ; ಇದಿರ ಹಳಿಯಲು ಬೇಡ; ಅನ್ಯರಿಗೆ ಅಸಹ್ಯ ಪಡಬೇಡ.