ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜನಿಷ್ಠೆ’ಯ ಚಪಲ...

Last Updated 12 ಜೂನ್ 2015, 19:30 IST
ಅಕ್ಷರ ಗಾತ್ರ

ಆರ್. ಪೂರ್ಣಿಮಾ ಅವರು ‘ಜೀವನ್ಮುಖಿ’ ಅಂಕಣ ದಲ್ಲಿ (ಪ್ರ.ವಾ.,  ಜೂನ್ 9) ‘ಜನಪರ ಆಲೋಚನೆಗಳನ್ನು ಎಲ್ಲರಿಗೂ ಅವರದೇ ಭಾಷೆಯಲ್ಲಿ ತಲುಪಿಸುವ ವ್ಯವಸ್ಥೆ ಕುರಿತು ಚಿಂತಿಸುವುದು ಅಗತ್ಯ’ ಎಂದು ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರದಡಿ ಬರುವ ‘ಆಕಾಶವಾಣಿ’ಯ ಅಧಿಕಾರಿಗಳಿಗೆ ಆಕಾಶವಾಣಿ ಮೂಲಕ ಸಮಕಾಲೀನ ವಿದ್ಯಮಾನಗಳ ಬಗ್ಗೆ ಜನರಿಗೆ ವಿಚಾರ ವಿಮರ್ಶೆ ಮತ್ತು ಚರ್ಚೆಗಳನ್ನು ಪ್ರಚುರಪಡಿಸಲು ಕನ್ನಡದಂತಹ ದೇಶಭಾಷೆ ಹೆಚ್ಚು ಪರಿಣಾಮಕಾರಿ ಎಂದು ಅನಿಸಿಲ್ಲ.

ಆದ್ದರಿಂದಲೇ ಅವರು ರೇಡಿಯೊ ಕಾರ್ಯಕ್ರಮಗಳನ್ನು ಹೆಚ್ಚು ಜನರು ಕೇಳುವ ರಾತ್ರಿ 9ರಿಂದ 10ರ ಸಮಯದಲ್ಲಿ ಕನ್ನಡ ಕಾರ್ಯಕ್ರಮಗಳ ಬದಲು ದೆಹಲಿ ಕೇಂದ್ರದಿಂದ ಇಂಗ್ಲಿಷಿನಲ್ಲಿ ಪ್ರಸಾರವಾಗುವ ‘ಸ್ಪಾಟ್‌ ಲೈಟ್‌’ (ಪ್ರತಿದಿನ ರಾತ್ರಿ 9.15 ರಿಂದ 9.30) ಮತ್ತು ‘ಕರೆಂಟ್‌ ಅಫೇರ್‍್ಸ್’ (ಶುಕ್ರವಾರ ರಾತ್ರಿ 9.30 ರಿಂದ 10) ಕಾರ್ಯಕ್ರಮಗಳನ್ನು ಕಳೆದ ತಿಂಗಳಿಂದ, ಬೆಂಗಳೂರು ಕೇಂದ್ರದಿಂದ ಮರು ಪ್ರಸಾರ ಮಾಡಲು ಪ್ರಾರಂಭಿಸಿದ್ದಾರೆ. ಈ   ಬಗ್ಗೆ ಪ್ರೊ. ಸಿ.ಎನ್‌. ರಾಮಚಂದ್ರನ್‌ ಅವರು ವಾಚಕರ ವಾಣಿಯಲ್ಲಿ  ತಮ್ಮ ಆಕ್ಷೇಪಣೆಯನ್ನು (ಮೇ 5) ದಾಖಲಿಸಿದ್ದರು.

ವಾಸ್ತವದಲ್ಲಿ ಈ ಇಂಗ್ಲಿಷ್‌ ಕಾರ್ಯಕ್ರಮಗಳ ಮರು ಪ್ರಸಾರ ಅಗತ್ಯವಿರಲಿಲ್ಲ. ಏಕೆಂದರೆ ಆಕಾಶವಾಣಿಯವರೇ ಇಂತಹ ಮರುಪ್ರಸಾರಗಳಿಂದ ಸ್ಥಳೀಯ ಭಾಷಾ ಕಾರ್ಯ ಕ್ರಮಗಳಿಗೆ ಅಡಚಣೆಯಾಗುವುದನ್ನು ಮನಗಂಡು ಇಪ್ಪತ್ತು ವರ್ಷಗಳ ಹಿಂದೆಯೆ ರಾಷ್ಟ್ರೀಯ ಕಾರ್ಯಕ್ರಮಗಳ ರಾಷ್ಟ್ರವ್ಯಾಪಿ ಪ್ರಸಾರಕ್ಕಾಗಿ ‘ನ್ಯಾಷನಲ್‌ ಚಾನೆಲ್‌’ ಎಂಬ ವಾಹಿನಿಯನ್ನು ಸ್ಥಾಪಿಸಿದ್ದಾರೆ. ಇದಕ್ಕಾಗಿ ನಾಗಪುರದಲ್ಲಿ ಒಂದು ಮೆಗಾವಾಟ್‌ ಸಾಮರ್ಥ್ಯದ ಟ್ರಾನ್ಸ್‌ಮಿಟರ್‌ ಸ್ಥಾಪಿಸ ಲಾಗಿದೆ. ಇದರ ವ್ಯಾಪ್ತಿಯನ್ನು ಹೆಚ್ಚಿಸಲು ಇನ್ನೂ ನಾಲ್ಕು ಕಡೆಗಳಲ್ಲಿ ಟ್ರಾನ್ಸ್‌ಮಿಟರ್‌ಗಳನ್ನು ಸ್ಥಾಪಿಸಲಾಗಿದೆ.

ಇಂತಹ ಒಂದು ಟ್ರಾನ್ಸ್‌ಮಿಟರ್‌ ಬೆಂಗಳೂರಿನಲ್ಲಿದ್ದು ಈ ಚಾನೆಲ್‌ನ  ಕಾರ್ಯಕ್ರಮಗಳು (ಸಂಜೆ  6.45 ರಿಂದ ಬೆಳಗಿನ 6.12ರ ವರೆಗೆ) ಕರ್ನಾಟಕದಾದ್ಯಂತ ಕೇಳಬಹುದಾಗಿದೆ. ಈ ಮಾಹಿತಿ ಆಲ್‌ ಇಂಡಿಯಾ ರೇಡಿಯೊದ ವೆಬ್‌ಸೈಟಿನಲ್ಲಿ ಲಭ್ಯ. ಇದನ್ನೆಲ್ಲಾ ಗಮನಿಸಿದರೆ ನಮ್ಮ ಅಧಿಕಾರಿವರ್ಗ ರಾಜನಿಗಿಂತ ಹೆಚ್ಚು ರಾಜನಿಷ್ಠೆ ತೋರಿಸುವ ಚಪಲಕ್ಕೆ ಬಲಿಯಾಗಿರುವುದೇ ಸರ್ಕಾರಿ ಸಂಸ್ಥೆಗಳ ಸೋಲಿಗೆ ಕಾರಣವಾಗಿದೆ ಎಂದು ಅನಿಸದಿರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT