ರಾಜ್ಯದ ಜನಸಂಖ್ಯೆ ಅಂದಾಜು ಆರು ಕೋಟಿಯಾದರೆ, ಬೆಂಗಳೂರಿನ ಜನಸಂಖ್ಯೆಯೇ ಹತ್ತಿರ ಹತ್ತಿರ ಒಂದು ಕೋಟಿ. ಇದರ ಅರಿವಿರುವ ಯಾರಿಗೇ ಆದರೂ ಅಭಿವೃದ್ಧಿಯ ವಿಚಾರದಲ್ಲಿ ಹಳ್ಳಿಗಳನ್ನು ಕಡೆಗಣಿಸಿ ನಗರಗಳಿಗೆ ಅತಿ ಎನಿಸುವ ಆದ್ಯತೆ ನೀಡುವುದರ ದುಷ್ಪರಿಣಾಮ ಅರ್ಥವಾಗದೇ ಇರದು.
ಹಳ್ಳಿಗಳಿಂದ ನಗರಗಳಿಗೆ ನಡೆಯುತ್ತಿರುವ ಭಯಾನಕ ಪ್ರಮಾಣದ ವಲಸೆಯಿಂದಾಗಿ ನಗರಗಳು ಎಂತಹ ಅತ್ಯಾಧುನಿಕ ಮತ್ತು ಸುಸಜ್ಜಿತ ಮೂಲಸೌಕರ್ಯ ಹೊಂದಿದ್ದರೂ ಕುಸಿದುಹೋಗುವ ಪರಿಸ್ಥಿತಿ ಉಂಟಾಗಿದೆ. ದೇಶದ ಪ್ರತಿ ಹಳ್ಳಿಗೂ ಮೂಲಸೌಕರ್ಯ ಸಹಿತ ಸರ್ವ ರೀತಿಯ ಅಭಿವೃದ್ಧಿ ವಿಚಾರದಲ್ಲಿ ಸಮಾನ ಆದ್ಯತೆ ನೀಡಬೇಕು.
ಈ ಮೂಲಕ ಅಲ್ಲಿನ ಜನರಿಗೆ ಶಿಕ್ಷಣ, ಉದ್ಯೋಗ ಎಲ್ಲವೂ ಸ್ಥಳೀಯವಾಗಿ ಸಿಗುವಂತೆ ಮಾಡಿ ವಲಸೆಯನ್ನು ತಡೆಯುವ ನಿಟ್ಟಿನಲ್ಲಿ ಗಂಭೀರ ಯತ್ನ ಮಾಡಬೇಕು. ಇಲ್ಲದಿದ್ದರೆ ಹೊಸ ‘ಸ್ಮಾರ್ಟ್ ಸಿಟಿ’ ಯೋಜನೆಯ ಅಡಿಯಲ್ಲಿ ‘ಸಿಟಿ’ಗಳ ನಿರ್ಮಾಣವೇನೋ ಆದೀತು. ಆದರೆ ಅವು ‘ಸ್ಮಾರ್ಟ್’ ಆಗುವುದು ಕಷ್ಟ ಎಂಬುದನ್ನು ನಮ್ಮ ಆಡಳಿತಗಾರರು ಅರಿತುಕೊಳ್ಳಬೇಕು.