ಸಂತೇಬೆನ್ನೂರು: ‘ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಚನ್ನಗಿರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳೇ ಜಯದ ಮಂತ್ರ’ ಎಂದು ಶಾಸಕ ವಡ್ನಾಳ್ ರಾಜಣ್ಣ ಅಭಿಪ್ರಾಯಪಟ್ಟರು.ಇಲ್ಲಿನ ಜಾಮಿಯಾ ಶಾದಿ ಮಹಲ್ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ನೀಡಿದ ‘ಭಾಗ್ಯ’ಗಳು ಜನರ ಮನೆ ಬಾಗಿಲನ್ನು ತಲುಪಿವೆ. ಎದೆಗುಂದುವ ಅಗತ್ಯ ಇಲ್ಲ. ಮತದಾರರ ಬಳಿ ಸಾಧನೆಗಳನ್ನು ಹೇಳುವ ಚುರುಕುತನ ನಿಮಗಿರಲಿ. ಇದು ಪ್ರಮುಖ ಚುನಾವಣೆ. ಸಮೀಕ್ಷೆಗಳು ಗೊಂದಲ ಮೂಡಿಸುತ್ತವೆ. ಪ್ರಾಮಾಣಿಕವಾಗಿ ಪಕ್ಷದ ಗೆಲುವಿಗೆ ಶ್ರಮಿಸಿ’ ಎಂದು ಹೇಳಿದರು.
‘ಪಕ್ಷ ತೊರೆದು ಹೋದವರ ಗತಿ ಬೀದಿ ಪಾಲಾಗಿದೆ. ಯಾರನ್ನೂ ಬೂಟಾಟಿಕೆಯಿಂದ ಪಕ್ಷಕ್ಕೆ ಕರೆತರುವುದು ಬೇಡ. ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲೇ ನಿರತರಾಗಿದ್ದಾರೆ. ರೈತರ ಕಷ್ಟಗಳಿಗೆ ಸ್ಪಂದಿಸಿಲ್ಲ. ಇಂದು ಪೆಟ್ರೊಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ. ಕೇಂದ್ರ ಸರ್ಕಾರ ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ₹ 402 ಏರಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿದಿದೆ. ಆದರೆ ಇಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರುಗತಿಯಲ್ಲಿದೆ. ಹೀಗಾಗಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿರಿ’ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಜಿ.ಶಶಿಕಲಾ ಮೂರ್ತಿ ಮಾತನಾಡಿ, ‘ತಾಳ್ಮೆಯ ರಾಜಕಾರಣ ಇರಬೇಕು. ತುಳಿತದ ರಾಜಕಾರಣ ಬೇಡ. ವಡ್ನಾಳ್ ರಾಜಣ್ಣ ಅವರ ಜನಪರ ಕಾರ್ಯಕ್ರಮಗಳು ಮತ ಬೇಡಿಕೆಗೆ ಶಕ್ತಿ ನೀಡಿವೆ’ ಎಂದು ಹೇಳಿದರು.