ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಸಿದ ಬದಲಾವಣೆ, ಸ್ವಸ್ಥ ಸಮಾಜ, ಘನವಾದ ಬದುಕು ಕೊಡಬಲ್ಲವೇ ಕಲ್ಯಾಣ ಕಾರ್ಯಕ್ರಮಗಳು?

Last Updated 20 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಳಿಗ್ಗೆ 8.30ರ ಸಮಯ. ನಾನು ಕಚೇರಿಯ ಹಾದಿ ಹಿಡಿದಿದ್ದೆ. ಮೈಸೂರು ಮಹಾನಗರ ಪಾಲಿಕೆಯು ರಸ್ತೆ ಬದಿಯಲ್ಲಿಟ್ಟಿದ್ದ ಲೋಹದ ದೊಡ್ಡ ಕಸದ ತೊಟ್ಟಿಯಲ್ಲಿ ಗೃಹ ಬಳಕೆ ತ್ಯಾಜ್ಯ ತುಂಬಿ ತುಳುಕುತ್ತಿತ್ತು. ಯುವಕನೊಬ್ಬ ಅದರೊಳಗೆ ನಿಂತು ತನ್ನ ‘ಸಂಪತ್ತ’ನ್ನು ಆಯುತ್ತಿದ್ದ. ಹೀಗೆ ಆಯ್ದದ್ದನ್ನು ಹೊರಗೆ ನಿಂತಿದ್ದ ಬಾಲಕನಿಗೆ ಹಸ್ತಾಂತರಿಸುತ್ತಿದ್ದ. ಅಂದಾಜು 8ರಿಂದ 10 ವರ್ಷದ ಆ ಬಾಲಕ, ಬಲಗೈಯಲ್ಲಿದ್ದ ಪೊಟ್ಟಣದಿಂದ ಆಹಾರ ತಿನ್ನುತ್ತಿದ್ದ, ಜೊತೆ ಜೊತೆಗೆ ತೊಟ್ಟಿಯಲ್ಲಿದ್ದಾತ ನೀಡುತ್ತಿದ್ದ ವಸ್ತುಗಳನ್ನು ತನ್ನ ಬೆನ್ನಿಗೆ ನೇತು ಹಾಕಿಕೊಂಡಿದ್ದ ಚೀಲದೊಳಕ್ಕೆ ತುಂಬುತ್ತಿದ್ದ.

ಆ ಬಾಲಕನನ್ನು ನೋಡುತ್ತಿದ್ದಂತೆಯೇ ನನ್ನಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸಿದವು. ಇವನು ಯಾಕಾಗಿ ಇಂತಹ ಜೀವನವನ್ನು ನಡೆಸುತ್ತಿದ್ದಾನೆ?  ಅವನಿರುವಲ್ಲಿ ನಾನು ಯಾಕಿಲ್ಲ? ನನ್ನ ಮತ್ತು ಅವನ ನಡುವೆ ಯಾವ ಕಾರಣಕ್ಕಾಗಿ ಭಿನ್ನತೆ ಇದೆ? ಆತನ ಅಥವಾ ಅವನ ಕುಟುಂಬದ ಆರ್ಥಿಕ ಸ್ಥಿತಿ ಚೇತರಿಸಿದರೆ ಅವನನ್ನು ಈ ಕಸದ ತೊಟ್ಟಿಯಿಂದ ಉತ್ತಮ ಜೀವನದೆಡೆಗೆ ಕೊಂಡೊಯ್ಯಬಹುದೇ? ಶಾಲೆಗೆ ಹೋಗುವುದು ಅಥವಾ ಶಿಕ್ಷಣ ಪಡೆಯುವುದರಿಂದ ಬಾಲಕನ ಜೀವನದಲ್ಲಿ ಬದಲಾವಣೆ ಸಾಧ್ಯವೇ? ಕಸದ ತೊಟ್ಟಿಯಲ್ಲಿರುವ ವ್ಯಕ್ತಿ (ಅಪ್ಪನೋ ಅಥವಾ ಅಣ್ಣನೋ) ಮಾತ್ರ ಬಾಲಕ ಹೊಂದಿರುವ ಏಕೈಕ ಸಾಮಾಜಿಕ ಸಂಬಂಧವೇ? ಒಂದು ವೇಳೆ ಬಾಲಕ ವಿಸ್ತಾರವಾದ ಸಾಮಾಜಿಕ ವ್ಯವಸ್ಥೆಯ ಭಾಗವಾಗಿದ್ದರೆ ಆತ ಕೂಡ ಘನವಾದ ಮತ್ತು ಗೌರವಯುತ ಜೀವನ ನಡೆಸುತ್ತಿದ್ದನೇ...?

ಸರ್ಕಾರಗಳ ಹಲವು ಕಲ್ಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಿಜವಾಗಿಯೂ ಬಡವರ ಜೀವನದಲ್ಲಿ ಬದಲಾವಣೆಗಳನ್ನು ತರುತ್ತವೆಯೇ  ಅಥವಾ ಇವು ರಾಜಕೀಯ ಭಾಷಣ ಕಲೆ ಮತ್ತು ಭಾರತದ ಚಹರೆಯ ಬದಲಾವಣೆಯನ್ನೂ ಮೀರುತ್ತವೆಯೇ ಎಂಬ ಪ್ರಶ್ನೆಯನ್ನು ಇಂತಹ ಪ್ರಕರಣಗಳು ಹುಟ್ಟುಹಾಕುತ್ತವೆ.

ಇದು ನಿಜವಾಗಿಯೂ ನಾವು ಬಯಸುವ ಬದಲಾವಣೆಯೇ? ಕೇವಲ ಆದಾಯದ ಹೆಚ್ಚಳ ಮತ್ತು ಆರ್ಥಿಕ ಪ್ರಗತಿಯು ಬದಲಾವಣೆಗಳನ್ನು ತರುವುದೇ ಅಥವಾ ಆರ್ಥಿಕತೆಯ ಪರಿಣಾಮಗಳನ್ನು ಎದುರಿಸುವುದಕ್ಕೂ ಮುನ್ನ, ಇನ್ನೂ ಆಳವಾದ ಮಾನವಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ನಾವು ಬದಲಾವಣೆ ತರಬೇಕಾದ ಅಗತ್ಯವಿದೆಯೇ?

ಬ್ರಿಟನ್ನಿನ ಆರ್ಥಿಕ ತಜ್ಞ ಆಂಗಸ್‌ ಮ್ಯಾಡಿಸನ್‌ ತಮ್ಮ ‘ವರ್ಲ್ಡ್‌ ಎಕಾನಮಿ- ಎ ಮಿಲೆನಿಯಲ್‌ ಪರ್‌್ಸಪೆಕ್ಟಿವ್‌’ ಕೃತಿಯಲ್ಲಿ 16ನೇ ಶತಮಾನದವರೆಗೆ ಭಾರತ ಹೇಗೆ ಜಗತ್ತಿನ ದೊಡ್ಡ ಆರ್ಥಿಕ (ಹೆಚ್ಚು ದೇಶೀಯ ಆಂತರಿಕ ಉತ್ಪನ್ನ– ಜಿಡಿಪಿ ಹೊಂದಿದ್ದ ರಾಷ್ಟ್ರ) ಶಕ್ತಿಯಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ನಮ್ಮ ದೇಶದ ಆರ್ಥಿಕ ಸ್ಥಿತಿಯ ಕುಸಿತ 17ನೇ ಶತಮಾನದಲ್ಲಿ ಆರಂಭವಾಯಿತು. ಆ ಸಮಯದಲ್ಲಿ ಸ್ವತಂತ್ರವಾಗಿದ್ದ ರಾಷ್ಟ್ರ, ಜಗತ್ತಿನ ಅತಿ ಬಡ ರಾಷ್ಟ್ರಗಳಲ್ಲಿ ಒಂದು ಎಂಬ ಹಣೆಪಟ್ಟಿಯನ್ನು ತನ್ನದಾಗಿಸಿಕೊಂಡಿತು.

ಆರ್ಥಿಕ ಸ್ಥಿತಿಯನ್ನು ಹೊರತುಪಡಿಸಿ ನೋಡುವುದಾದರೆ, 16-17ನೇ ಶತಮಾನದಲ್ಲಿ ಭಾರತದಲ್ಲಿ ಮಾನವ ಸಾಮರ್ಥ್ಯ ಭಾರಿ ಪ್ರಮಾಣದಲ್ಲಿ ವಿಸ್ತಾರಗೊಂಡಿತ್ತು. ಬೀಜಗಣಿತದಿಂದ ಕಲನಶಾಸ್ತ್ರದವರೆಗೆ ‘ಶೂನ್ಯ’ದಿಂದ ‘ಪೈ’ವರೆಗೆ, ಟ್ರಿಗ್ನಾಮೆಟ್ರಿಯಿಂದ ಖಗೋಳಶಾಸ್ತ್ರದವರೆಗೆ, ದೊಡ್ಡ ಧಾರ್ಮಿಕ ಕೇಂದ್ರಗಳಿಂದ ಹಿಡಿದು ಅತ್ಯುನ್ನತ ಮಟ್ಟದ ಅಧ್ಯಾತ್ಮದ ಚಿಂತನೆವರೆಗೆ ನಾವು ಎಲ್ಲದರಲ್ಲೂ ಇದ್ದೆವು.

ಹಲವು ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ  ಮಾನವ ಪ್ರಯತ್ನದ ಪ್ರತಿ ಕ್ಷೇತ್ರದಲ್ಲೂ ಅವಕಾಶಗಳು ಸಾಕಷ್ಟಿದ್ದವು. ಮಾನವ ಮತ್ತು ಸಾಮಾಜಿಕ ಬಂಡವಾಳ (ಹ್ಯೂಮನ್‌ ಅಂಡ್‌ ಸೋಶಿಯಲ್‌ ಕ್ಯಾಪಿಟಲ್‌) ಸೃಷ್ಟಿಯನ್ನು ಕೇಂದ್ರೀಕರಿಸಿದ ಅಭಿವೃದ್ಧಿ ಪರ ವಾತಾವರಣವನ್ನು ಭಾರತ ಹೊಂದಿತ್ತು.

ದೊಡ್ಡ ಪ್ರಮಾಣದ ಆರ್ಥಿಕ ಪರಿಣಾಮಗಳೂ ಕಂಡುಬಂದವು. ಅಭಿವೃದ್ಧಿ ಹೊಂದುತ್ತಿದ್ದ ಆರ್ಥಿಕ ಸ್ಥಿತಿಯು ನಮ್ಮ ಮಾನವ ಮತ್ತು ಸಾಮಾಜಿಕ ಬಂಡವಾಳದ ವೃದ್ಧಿಗೆ ಕಾರಣವಾಯಿತೇ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಆದರೆ, ಒಂದು ರಾಷ್ಟ್ರದ ಸಾಮಾಜಿಕ ಮತ್ತು ಮಾನವ ಸಂಪನ್ಮೂಲಗಳಲ್ಲಿ ಪ್ರಗತಿ ಹಾಗೂ ಸ್ಥಿರತೆ ಇದ್ದರೆ ಮಾತ್ರ ಸುಸ್ಥಿರ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂಬುದನ್ನು ಇತ್ತೀಚಿನ ಜಾಗತಿಕ ವಿದ್ಯಮಾನಗಳು ತೋರಿಸಿಕೊಟ್ಟಿವೆ.

ನಾವು ಯಾವ ರೀತಿಯ ‘ಮಾನವ ಬಂಡವಾಳ’ದ ಬಗ್ಗೆ ಮಾತನಾಡುತ್ತಿದ್ದೇವೆ? ಆರ್ಥಿಕತೆಗೆ ಕೊಡುಗೆ ನೀಡುವುದಕ್ಕಾಗಿ ಮತ್ತು ಈ ಪ್ರಕ್ರಿಯೆಯಲ್ಲಿ ಅರ್ಥಪೂರ್ಣವಾಗಿ ಭಾಗವಹಿಸುವುದಕ್ಕಾಗಿ ಅಗತ್ಯವಾದ ಮಾಹಿತಿಯನ್ನು ಸಂಗ್ರಹಿಸುವ ವ್ಯಕ್ತಿಯೊಬ್ಬನ ಸಾಮರ್ಥ್ಯವನ್ನು ಮಾನವ ಬಂಡವಾಳ ಎಂದು ಕರೆಯಬಹುದೇ ಅಥವಾ ಅದು ಅದಕ್ಕಿಂತಲೂ ಮಿಗಿಲಾದುದೇ?

ಮಾನವೀಯ ತಳಹದಿಯ ಮೇಲೆ ನಿಂತಿರುವ ಜಗತ್ತನ್ನು ಕಲ್ಪಿಸಿಕೊಳ್ಳಿ! ತನ್ನ ಬಳಕೆಯ ಬಗ್ಗೆ ಜವಾಬ್ದಾರಿ ಹೊಂದಿರುವ, ಪರಿಸರದ ಪ್ರತಿ ಸೃಷ್ಟಿಯನ್ನೂ ಗೌರವಿಸುವ, ಆಂತರಿಕ ಮತ್ತು ಬಾಹ್ಯ ಶಾಂತಿಗಾಗಿ ನಿರಂತರ ಹಾತೊರೆಯುವ, ಸಾಮರಸ್ಯದಿಂದ ಕೂಡಿದ ಜಗತ್ತು ನಿಜಕ್ಕೂ ಅದ್ಭುತವಾದುದು. ಇಂತಹ ಜಗತ್ತು ಇದ್ದರೆ, ಆ ಎಂಟು ವರ್ಷದ ಬಾಲಕ ಕೊಳೆತು ನಾರುವ ತ್ಯಾಜ್ಯದ ಮುಂದೆ ನಿಲ್ಲಬೇಕಾಗಿಲ್ಲ. ಜೀವನೋಪಾಯಕ್ಕಾಗಿ ಇತರರು ಎಸೆದ ವಸ್ತುಗಳನ್ನು ಆಯಬೇಕಾಗಿಲ್ಲ.

ಮಾನವರು ಪರಸ್ಪರ ಸಂಪರ್ಕ ಹೊಂದಿರುವ, ಪರಸ್ಪರ ನಂಬಿಕೆ, ವಿಶ್ವಾಸ, ಅವಲಂಬನೆ ಮತ್ತು ಕೊಡುಕೊಳ್ಳುವಿಕೆ ತತ್ವದಲ್ಲಿ ಜೀವನ ಸಾಗಿಸುವ ಜಗತ್ತನ್ನು ಕಲ್ಪಿಸಿಕೊಳ್ಳಿ. ‘ಸಾಮಾಜಿಕ ಬಂಡವಾಳ’ ಎಂದರೆ ಇದೇ. ಸ್ವಯಂನಾಶದ ಕಡೆಗೆ ಸಾಗುತ್ತಿರುವ ಜಗತ್ತನ್ನು ರಕ್ಷಿಸಲು ಇದು  ಅತಿ ಅಗತ್ಯ.

‘ಸಾಮಾಜಿಕ ಬಂಡವಾಳ’ ಎಂಬುದನ್ನು ಹಲವಾರು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಒಬ್ಬ ವ್ಯಕ್ತಿಯ ಸಾಮಾಜಿಕ ಸಂಪರ್ಕ ಜಾಲದಲ್ಲಿ ಅಂತರ್ಗತವಾಗಿರುವ ಮಾಹಿತಿ, ನಂಬಿಕೆ ಮತ್ತು ಕೊಡುಕೊಳ್ಳುವಿಕೆಯ ತತ್ವಗಳನ್ನು ‘ಸಾಮಾಜಿಕ ಬಂಡವಾಳ’ ಎನ್ನಬಹುದು. ಮಾತ್ರವಲ್ಲದೆ ನಮ್ಮ ನಡುವಿನ ವ್ಯವಸ್ಥೆ, ಸಂಬಂಧಗಳು ಮತ್ತು ಸಮಾಜದ ಸಾಮಾಜಿಕ ಪರಿಣಾಮದ ಗುಣಮಟ್ಟ ಹಾಗೂ ಪ್ರಮಾಣಕ್ಕೆ ರೂಪ ಕೊಡುವ ನಿಯಮಗಳನ್ನೂ ಸಾಮಾಜಿಕ ಬಂಡವಾಳ ಎನ್ನಬಹುದು.

‘ಸಾಮಾಜಿಕ ಬಂಡವಾಳ’ ಎಂದರೆ ಸಮಾಜದ ಆಧಾರವಾಗಿರುವ ವ್ಯವಸ್ಥೆಗಳು ಮಾತ್ರವಲ್ಲ, ಅದು ಸಮಾಜ ಮತ್ತು ಸಂಸ್ಥೆಗಳನ್ನು ಪರಸ್ಪರ ಬಿಗಿಯಾಗಿ ಜೋಡಿಸುವ ಅಂಟು ಕೂಡ ಹೌದು. ಭಾರತೀಯ ಸಮಾಜವು ಈ ಹಿಂದೆ ಇಂತಹುದೇ ತಳಹದಿಯ ಮೇಲೆ ನಿಂತಿತ್ತು.

ಮಾನವ ಮತ್ತು ಸಾಮಾಜಿಕ ಬಂಡವಾಳದ ಕಾರಣದಿಂದಾಗಿ ದೇಶೀಯ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಸುದೀರ್ಘ ಅವಧಿವರೆಗೆ ಸುಸ್ಥಿರವಾಗಿಯೇ ಇತ್ತು. ಆದರೆ ದುರದೃಷ್ಟವಶಾತ್‌, ಬ್ರಿಟಿಷರ ವಸಾಹತುಶಾಹಿ ಆಡಳಿತವು ಮಾನವ ಮತ್ತು ಸಾಮಾಜಿಕ ಬಂಡವಾಳ ವ್ಯವಸ್ಥೆಯ ಅಡಿಪಾಯವಾಗಿದ್ದ ನಮ್ಮ ಸಾಮಾಜಿಕ, ಸಾಂಸ್ಕೃತಿಕ ಪರಿಸರ, ನಾಗರಿಕ ಇತಿಹಾಸವನ್ನು ನಾಶ ಮಾಡಿತು.
ದೇಶ ಆರ್ಥಿಕವಾಗಿ ಕುಸಿಯುತ್ತಿದ್ದ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ಮುನ್ನೆಲೆಗೆ ಬಂದರು. ಇದಕ್ಕೆಲ್ಲ ಸಾಕ್ಷಿಯಾಗಿದ್ದ ಅವರು, ಸಮುದಾಯದ ಅಭಿವರ್ಧನೆ ಮಾತ್ರ ಇದಕ್ಕೆಲ್ಲ ಪರಿಹಾರ ಎಂದು ಪ್ರತಿಪಾದಿಸಿದರು.

ಅದಕ್ಕಾಗಿಯೇ, ತಮ್ಮದೇ ಆದ ಮಾನವ ಬಂಡವಾಳವನ್ನು ಸೃಷ್ಟಿಸುವಂತೆ ಮತ್ತು ರಾಷ್ಟ್ರದ ಸಾಮಾಜಿಕ ಬಂಡವಾಳ ಸೃಷ್ಟಿಗೆ ಕೆಲಸ ಮಾಡುವ ಮೂಲಕ ಜೀವನಕ್ಕೆ ‘ಅರ್ಥ’ ನೀಡುವಂತೆ ಅವರು ಯುವಜನತೆಗೆ ಕರೆ ನೀಡಿದ್ದರು. ಆ ಸಂದರ್ಭದಲ್ಲಿ ಚರ್ಚೆಯಲ್ಲಿದ್ದ ‘ಸುಸ್ಥಿರ ಅಭಿವೃದ್ಧಿ’ ಪರಿಕಲ್ಪನೆ ಕೇವಲ ಘೋಷಣೆಯಾಗಿರಲಿಲ್ಲ; ಬದಲಿಗೆ ಹೊಸ ‘ಭಾರತ’ದ ನಿರ್ಮಾಣಕ್ಕೆ ಮಾಡಿದ ಪ್ರಾಯೋಗಿಕ ಮತ್ತು ವಾಸ್ತವಿಕ ಪ್ರಯತ್ನವಾಗಿತ್ತು.

ನವ ಭಾರತದ ದೃಷ್ಟಿಕೋನದಲ್ಲಿ, ಜನರಿಗೆ ಮತ್ತು ಸಮುದಾಯಗಳಿಗೆ ನೀಡುವ ಭದ್ರತೆ, ಸ್ವಾತಂತ್ರ್ಯವನ್ನೂ  ಅಭಿವೃದ್ಧಿ ಎಂದು ಕಾಣಲಾಗುತ್ತಿದೆ. ತಮ್ಮ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಮತ್ತು ಅತ್ಯುತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಜನರಿಗೆ ಇಲ್ಲಿ ಅವಕಾಶ ಇದೆ. 

ಅಭಿವೃದ್ಧಿಯ ಪ್ರವರ್ತಕರಾದ ಸರ್ಕಾರ, ನಾಗರಿಕ ಸಮಾಜ ಅಥವಾ ಕಾರ್ಪೊರೇಟ್‌ ಜಗತ್ತು ಜನರ ಮಾತನ್ನು ಕೇಳಬೇಕು, ಸಮಸ್ಯೆಗಳನ್ನು ಆಲಿಸಬೇಕು ಮತ್ತು ಅವರ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರುವಂತೆ ಆಗಬೇಕು. ದೇಶದ ಅಭಿವೃದ್ಧಿಯನ್ನು ವ್ಯಾಖ್ಯಾನಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಈ ಅಭಿವೃದ್ಧಿಯ ಕನಸನ್ನು ವಾಸ್ತವಕ್ಕೆ ಪರಿವರ್ತಿಸುವ ಮೊದಲ ರಾಷ್ಟ್ರ ಭಾರತ ಆಗಬೇಕಾಗಿದೆ. ಅಲ್ಲಿ ಕಾನೂನು ಪಾಲನೆಯು ಒಂದು ಪದ್ಧತಿಯಾಗಬೇಕು. ಒಬ್ಬನೇ ಒಬ್ಬ ಪ್ರಜೆ ಹಸಿವಿನಿಂದ ನರಳಬಾರದು. ಮಾನವ ಹಕ್ಕುಗಳು ಘೋಷಣೆಗಷ್ಟೇ ಸೀಮಿತವಾಗದೆ ಜೀವನ ಕ್ರಮವಾಗಬೇಕು. ಪ್ರಜಾಸತ್ತಾತ್ಮಕ ಪಾಲ್ಗೊಳ್ಳುವಿಕೆಯು ಕೇವಲ ಆಡಂಬರದ ಅಪೇಕ್ಷೆಯಾಗಬಾರದು. ಬದಲಾಗಿ, ಜನರ ಪ್ರತಿದಿನದ ಅಭಿವ್ಯಕ್ತಿಯಾಗಬೇಕು.

ಆಹಾರ, ಪೌಷ್ಟಿಕಾಂಶ, ಜೀವನೋಪಾಯ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಧಾರ್ಮಿಕ ಸ್ವಾತಂತ್ರ್ಯ ಕೇವಲ ರಾಜಕೀಯ ಭರವಸೆಗಳಾಗದೆ ಜನಸಾಮಾನ್ಯರ ಹಕ್ಕುಗಳಾಬೇಕು. ಅಭಿವೃದ್ಧಿ ಹೊಂದುತ್ತಿರುವ ಮಾನವ ಮತ್ತು ಸಾಮಾಜಿಕ ಬಂಡವಾಳಗಳು ಅಗಾಧ ಪ್ರಮಾಣದಲ್ಲಿ ಆರ್ಥಿಕ ಪರಿಣಾಮಗಳನ್ನು ಬೀರಬೇಕು. ಆಗ ಮಾತ್ರ ಭಾರತ ‘ಅಭಿವೃದ್ಧಿ ಹೊಂದಿದ ರಾಷ್ಟ್ರ’ವಾಗುತ್ತದೆ.

(ಲೇಖಕರು ಸಾಮಾಜಿಕ ಕಾರ್ಯಕರ್ತರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT