<p>`ಹಲವು ವರ್ಷಗಳ ಹಿಂದೆ ನಾವು ಭವಿಷ್ಯದೊಡನೆ ಒಪ್ಪಂದ ಮಾಡಿಕೊಂಡೆವು. ಈಗ ಪೂರ್ಣವಾಗಿ ಅಲ್ಲದಿದ್ದರೂ ಗಣನೀಯವಾಗಿ ನಮ್ಮ ಸಂಕಲ್ಪವನ್ನು ಸಾಕಾರಗೊಳಿಸುವ ಸಮಯ ಬಂದಿದೆ. ಸಮಸ್ತ ಜಗತ್ತು ನಿದ್ರಿಸುವ ಮಧ್ಯರಾತ್ರಿಯ ವೇಳೆ ಭಾರತ ಚೈತನ್ಯಗೊಂಡು ಸ್ವಾತಂತ್ರ್ಯಕ್ಕೆ ಹೊರಳುತ್ತಿದೆ. ಚರಿತ್ರೆಯಲ್ಲಿ ಒಂದು ಅಪರೂಪದ ಮುಹೂರ್ತ ಕಾಣಿಸಿಕೊಳ್ಳುತ್ತದೆ; ಆ ಘಳಿಗೆಯಲ್ಲಿ ಹಳೆಯದನ್ನು ಬಿಟ್ಟು ಹೊಸದಕ್ಕೆ ಪದಾರ್ಪಣ ಮಾಡುತ್ತೇವೆ; ಆಗ ಒಂದು ಯುಗ ಮುಗಿದು ದೀರ್ಘಕಾಲದ ದಿಗ್ಭಂಧನದಿಂದ ಒಂದು ದೇಶದ ಆತ್ಮ ಬಿಡುಗಡೆ ಹೊಂದಿ ಮಾತನಾಡತೊಡಗುತ್ತದೆ. ಇಂಥ ಒಂದು ವಿದ್ಯುಕ್ತ ಕ್ಷಣದಲ್ಲಿ ಭಾರತಾಂಬೆಯ, ಮತ್ತವಳ ಪ್ರಜೆಗಳ ಸೇವೆಗೆ, ಅಷ್ಟೇ ಏಕೆ, ವಿಶಾಲವಾದ ಮನುಕುಲದ ಸೇವೆಗೆ ಸಮರ್ಪಿಸಿಕೊಳ್ಳುವ ಪ್ರತಿಜ್ಞೆ ಮಾಡಬೇಕಾದುದು ವಿಹಿತವಾಗಿದೆ.<br /> <br /> ಇತಿಹಾಸದ ಆರಂಭಕಾಲದಲ್ಲಿ ಭಾರತ ತನ್ನ ಅನಂತ ಅನ್ವೇಷಣೆಯಲ್ಲಿ ತೊಡಗಿದ್ದು ಶತಶತಮಾನಗಳಿಂದ ಅವಳ ಸತತ ಪ್ರಯತ್ನದ ಗುರುತುಗಳು ಗೋಚರವಾಗುತ್ತಿವೆ; ಹಾಗೆಯೇ ಅವಳ ಯಶಸ್ಸು ಮತ್ತು ಪರಾಭವದ ಭವ್ಯತೆಯನ್ನೂ ನಾವು ಕಾಣುತ್ತಿದ್ದೇವೆ. ತನ್ನ ಅದೃಷ್ಟದ ದಿನಗಳಲ್ಲೆಂತೊ ಅಂತೆಯೇ ನತದೃಷ್ಟ ದಿನಗಳಲ್ಲೂ ಆಕೆ ತನಗೆ ಚೈತನ್ಯ ನೀಡಿರುವ ಆದರ್ಶಗಳಿಂದ ದೃಷ್ಟಿಯನ್ನು ಬೇರೆಡೆ ಹೊರಳಿಸಿಲ್ಲ.<br /> <br /> ಈ ದಿನ ನಾವು ದುರದೃಷ್ಟಕರವಾದ ಪರ್ವವನ್ನು ಕೊನೆಗಾಣಿಸಿದ್ದೇವೆ ಮತ್ತು ಭಾರತ ಮತ್ತೆ ತನ್ನನ್ನು ತಾನು ಕಂಡುಕೊಳ್ಳುತ್ತಿದ್ದಾಳೆ. ನಾವು ಈ ದಿನ ನಮ್ಮ ಸಾಧನೆಯ ಸಂಭ್ರಮವನ್ನು ಆಚರಿಸುತ್ತಿರುವುದು ಒಂದು ಆರಂಭವಷ್ಟೆ, ಭವಿಷ್ಯತ್ತಿನಲ್ಲಿ ಇನ್ನೂ ಹೆಚ್ಚಿನ ಜಯ ಮತ್ತು ಸಾಧನೆ ನಮ್ಮದಾಗುವುದು. ಈ ಅವಕಾಶವನ್ನು ದೃಢವಾಗಿ ಹಿಡಿಯಲು ಹಾಗೂ ಭವಿಷ್ಯದ ಸವಾಲುಗಳನ್ನು ಸ್ವೀಕರಿಸಲು ನಮಗೆ ಧೈರ್ಯವಿದೆಯೇ?<br /> <br /> ಸ್ವಾತಂತ್ರ್ಯ ಮತ್ತು ಅಧಿಕಾರ ಜವಾಬ್ದಾರಿಯನ್ನು ಹೊತ್ತು ತರುತ್ತದೆ. ಹಾಗೆಯೇ ಸ್ವತಂತ್ರ ಭಾರತದ ಪ್ರಜೆಗಳನ್ನು ಪ್ರತಿನಿಧಿಸುವ ಈ ಸಾರ್ವಭೌಮ ಸದನ ಸಹ ಆ ಜವಾಬ್ದಾರಿಯನ್ನು ಹೊತ್ತಿದೆ. ಸ್ವಾತಂತ್ರ್ಯದ ಉದಯಕ್ಕೆ ಮೊದಲು ನಾವು ಎಷ್ಟೊಂದು ಪ್ರಸವವೇದನೆಯನ್ನು ಅನುಭವಿಸಿದ್ದೇವೆ; ಆ ಸಂಕಟದ ನೆನಪು ನಮ್ಮ ಹೃದಯಗಳಲ್ಲಿ ಇನ್ನೂ ಭಾರವಾಗಿ ಕುಳಿತಿದೆ. ಆದಾಗ್ಯೂ ಭೂತಕಾಲ ಮುಗಿದಿದೆ; ಭವಿಷ್ಯತ್ತು ನಮ್ಮನ್ನು ಕೈಬೀಸಿ ಕರೆಯುತ್ತಿದೆ.<br /> <br /> ಆ ಭವಿಷ್ಯತ್ತಿನಲ್ಲಿ ನಾವು ಆರಾಮವಾಗಿ ವಿರಮಿಸುವಂತಿಲ್ಲ; ಬದಲಿಗೆ ಸತತವಾಗಿ ದುಡಿಯಬೇಕು, ತನ್ಮೂಲಕ ನಾವು ಈಗಾಗಲೇ ಮಾಡಿರುವ, ಇಂದು ಮತ್ತೆ ಮಾಡುತ್ತಿರುವ ಪ್ರತಿಜ್ಞೆಯನ್ನು ಸಾಕಾರಗೊಳಿಸಬೇಕು. ಭಾರತದ ಸೇವೆ ಎಂದರೆ ನೊಂದ ಅಸಂಖ್ಯಾತರ ಸೇವೆಯೇ ಆಗಿದೆ. ಸೇವೆ ಎಂದರೆ ಬಡತನ, ಅಜ್ಞಾನ, ರೋಗ ಮತ್ತು ಅವಕಾಶಗಳ ಅಸಮಾನತೆಯನ್ನು ಹೋಗಲಾಡಿಸುವುದು ಎಂದರ್ಥ.<br /> <br /> ನಮ್ಮ ತಲೆಮಾರಿನಲ್ಲಿ ಮಹಾನ್ ವ್ಯಕ್ತಿಯೊಬ್ಬರಿದ್ದಾರೆ; ಆ ವ್ಯಕ್ತಿಯ ಮಹತ್ವಾಕಾಂಕ್ಷೆಯೆಂದರೆ ಪ್ರತಿಯೊಬ್ಬನ ಕಣ್ಣೀರನ್ನೂ ಒರೆಸುವುದು. ಅದು ನಮ್ಮಿಂದ ಸಾಧ್ಯವಾಗದಿರಬಹುದು; ಆದರೆ ಎಲ್ಲಿಯವರೆಗೆ ನೋವು ಮತ್ತು ಕಣ್ಣೀರು ಇರುತ್ತದೆಯೋ ಅಲ್ಲಿಯವರೆಗೆ ನಮ್ಮ ಕರ್ತವ್ಯ ಮುಗಿದಂತಾಗುವುದಿಲ್ಲ.<br /> <br /> ಹಾಗಾಗಿ ನಾವು ದುಡಿಯಬೇಕು, ಶ್ರಮವಹಿಸಿ ದುಡಿಯಬೇಕು. ನಾವು ಪ್ರತಿನಿಧಿಸುವಂಥ ಭಾರತದ ಜನತೆಗೆ ವಿನಂತಿ ಮಾಡಿಕೊಳ್ಳೋಣ : ಈ ಅಸೀಮ ಸಾಹಸದಲ್ಲಿ ನಂಬಿಕೆ ಹಾಗೂ ಆತ್ಮವಿಶ್ವಾಸದಿಂದ ನಮ್ಮಂದಿಗೆ ಕೈಜೋಡಿಸಿ ಎಂದು. ಸಣ್ಣತನದ ಮಾತುಗಳಿಗೆ, ವಿನಾಶಕಾರಿಯಾದ ಟೀಕೆಗಳಿಗೆ ಇದು ಸಮಯವಲ್ಲ; ಇತರರನ್ನು ದ್ವೇಷಿಸುವ ಹಾಗೂ ದೂಷಿಸುವ ಕಾಲವೂ ಇದಲ್ಲ. ಸ್ವತಂತ್ರ ಭಾರತದ ಘನವಾದ ಸೌಧವನ್ನು ನಿರ್ಮಿಸುವ ಮೂಲಕ ಮಾತೆಯ ಮಕ್ಕಳೆಲ್ಲ ವಾಸಿಸುವಂತೆ ಮಾಡಬೇಕು.<br /> <br /> ಅದನ್ನು ಸಾಕಾರಗೊಳಿಸುವ ಘಳಿಗೆ ಈಗ ಕೂಡಿ ಬಂದಿದೆ. ಸುದೀರ್ಘವಾದ ನಿದ್ರೆ ಮತ್ತು ಹೋರಾಟ, ಎಚ್ಚರ, ಚೈತನ್ಯ, ಸ್ವಾತಂತ್ರ್ಯ- ಎಲ್ಲವನ್ನೂ ಹೊತ್ತ ಘಳಿಗೆ ಇದು. ಚರಿತ್ರೆ ಹೊಸದಾಗಿ ಅನಾವರಣಗೊಂಡಿದೆ. ಈ ಚರಿತ್ರೆಯಲ್ಲಿ ನಾವು ಬಾಳಬೇಕು, ಪಾತ್ರವಹಿಸಬೇಕು; ಇತರರು ಅದರ ಬಗ್ಗೆ ಬರೆಯಬೇಕು.<br /> <br /> ಭಾರತದಲ್ಲಿರುವ ನಮಗೆ, ಏಷ್ಯಾದ ಎಲ್ಲ ಜನರಿಗೆ, ಅಷ್ಟೇ ಏಕೆ ಜಗತ್ತಿನ ಜನರಿಗೆಲ್ಲ ಇದು ಒಂದು ಮಹತ್ವದ ಕ್ಷಣ. ಸ್ವಾತಂತ್ರ್ಯವೆಂಬ ನಕ್ಷತ್ರ ಪೂರ್ವದಲ್ಲಿ ಉದಯವಾಗುತ್ತಿದೆ. ಹೊಸ ಭರವಸೆ ಮೂಡುತ್ತಿದೆ; ಬಹಳ ಕಾಲದಿಂದ ಧ್ಯಾನಿಸುತ್ತಿದ್ದ ಹೊಸ ಕಾಣ್ಕೆ ಸಾಕಾರಗೊಳ್ಳುತ್ತಿದೆ. ಆ ನಕ್ಷತ್ರ ಎಂದೂ ಮುಳುಗದಿರಲಿ, ಭರವಸೆ ಎಂದೂ ಹುಸಿಯಾಗದಿರಲಿ.<br /> <br /> ಇಂದಿನ ದಿನ ನಾವು ಮೊದಲು ನೆನೆಯಬೇಕಾದದ್ದು ನಮ್ಮ ಸ್ವಾತಂತ್ರ್ಯ ಶಿಲ್ಪಿ, ರಾಷ್ಟ್ರಪಿತ ಅವರನ್ನು. ಅವರು ಭಾರತದ ಪ್ರಾಚೀನ ಚೈತನ್ಯದ ಪ್ರತೀಕವಾಗಿ ಸ್ವಾತಂತ್ರ್ಯದ ಜ್ಯೋತಿಯನ್ನು ಎತ್ತಿ ಹಿಡಿದರು; ನಮ್ಮನ್ನು ಸುತ್ತುವರೆದಿದ್ದ ಕತ್ತಲನ್ನು ಹೋಗಲಾಡಿಸಿದರು. ಅನೇಕ ವೇಳೆ ನಾವು ಅಂಥ ಮಹಾನ್ ವ್ಯಕ್ತಿಯ ಯೋಗ್ಯ ಅನುಯಾಯಿಗಳಾಗಿಲ್ಲ. ಆತನ ಸಂದೇಶದಿಂದ ದೂರ ಸರಿದಿದ್ದೇವೆ. ಆದರೆ ಒಂದಂತೂ ನಿಜ: ನಾವಷ್ಟೇ ಅಲ್ಲ, ಇನ್ನು ಮುಂದೆ ಬರಲಿರುವ ಹಲವು ತಲೆಮಾರುಗಳ ಜನ ಆತನ ಸಂದೇಶವನ್ನು ನೆನೆಯುತ್ತಾರೆ, ತಮ್ಮ ಹೃದಯಗಳಲ್ಲಿ ಭಾರತದ ಈ ಮಹಾನ್ ಪುರುಷನ ರೂಪನ್ನು ಅಚ್ಚೊತ್ತಿಕೊಳ್ಳುತ್ತಾರೆ.<br /> <br /> ಭವಿಷ್ಯ ನಮ್ಮನ್ನು ಕೈಬೀಸಿ ಕರೆಯುತ್ತಿದೆ. ನಾವು ಎತ್ತ ಹೋಗಬೇಕು ಮತ್ತು ನಮ್ಮ ಪ್ರಯತ್ನ ಎತ್ತ ಸಾಗಬೇಕು? ಭಾರತದ ಜನಸಾಮಾನ್ಯನಿಗೆ, ರೈತರಿಗೆ ಹಾಗೂ ಕಾರ್ಮಿಕರಿಗೆ ಸ್ವಾತಂತ್ರ್ಯ ಮತ್ತು ಅವಕಾಶವನ್ನು ಕಲ್ಪಿಸುವುದು; ಬಡತನ, ಅಜ್ಞಾನ ಹಾಗೂ ರೋಗರುಜಿನದ ವಿರುದ್ಧ ಹೋರಾಡಿ ಅವನ್ನು ಕೊನೆಗೊಳಿಸುವುದು; ಪ್ರಗತಿಪರವೂ, ಸಮೃದ್ಧವೂ, ಜನತಂತ್ರವೂ ಆದ ರಾಷ್ಟ್ರವನ್ನು ನಿರ್ಮಿಸುವುದು; ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಂಸ್ಥೆಗಳನ್ನು ನಿರ್ಮಿಸಿ ತನ್ಮೂಲಕ ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಗೆ ನ್ಯಾಯಯುತವೂ ಸಂಪೂರ್ಣವೂ ಆದ ಬದುಕನ್ನು ದೊರಕಿಸಿಕೊಡುವುದು.<br /> <br /> ನಮ್ಮ ಮುಂದೆ ಇರುವುದು ಶ್ರಮದ ದುಡಿಮೆ. ಭಾರತದ ಜನತೆಗೆ ಸುಖಸಮೃದ್ಧಿಯ ಬದುಕನ್ನು ದೊರಕಿಸುವ ತನಕ ನಮಗಾರಿಗೂ ವಿಶ್ರಾಂತಿ ಎಂಬುದಿಲ್ಲ. ಒಂದು ದಿಟ್ಟ ಹೆಜ್ಜೆಯನ್ನಿಟ್ಟಿರುವ ಮಹಾನ್ ರಾಷ್ಟ್ರದ ಪ್ರಜೆಗಳು ನಾವು; ಹಾಗಾಗಿ, ಆ ದೊಡ್ಡ ಗೌರವಕ್ಕೆ ಅನುಗುಣವಾಗಿ ಬದುಕಬೇಕಾಗಿದೆ.<br /> <br /> ನಾವು ಯಾವ ಧರ್ಮಕ್ಕೇ ಸೇರಿದವರಾಗಿರಲಿ, ಸಮಾನ ಅಧಿಕಾರ, ಪ್ರತಿಷ್ಠೆ ಹಾಗೂ ಹೊಣೆಗಾರಿಕೆಯುಳ್ಳ ಭಾರತಾಂಬೆಯ ಮಕ್ಕಳು ನಾವು. ಮತಾಂಧತೆ ಹಾಗೂ ಸಂಕುಚಿತ ಮನೋಭಾವವನ್ನು ಪ್ರೊತ್ಸಾಹಿಸಲು ಸಾಧ್ಯವಿಲ್ಲ; ಏಕೆಂದರೆ ಆಲೋಚನೆಯಲ್ಲಾಗಲೀ ಅಥವಾ ಕ್ರಿಯೆಯಲ್ಲಾಗಲೀ ಸಂಕುಚಿತ ಮನೋಭಾವವನ್ನು ಹೊಂದಿದ ಜನರಿರುವ ರಾಷ್ಟ್ರ ದೊಡ್ಡರಾಷ್ಟ್ರವಾಗಲು ಸಾಧ್ಯವಿಲ್ಲ.<br /> <br /> ಅಮರವೂ, ನವ ನವೋನ್ಮೇಷಶಾಲಿಯೂ ಆದ ನಮ್ಮ ಮಾತೃಭೂಮಿಗೆ, ನಮ್ಮ ಹೃದಯಾಂತರಾಳದ ನಮನಗಳನ್ನು ಸಲ್ಲಿಸುತ್ತಾ ಆ ಮಾತೆಯ ಸೇವೆಗಾಗಿ ಮತ್ತೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ'.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಹಲವು ವರ್ಷಗಳ ಹಿಂದೆ ನಾವು ಭವಿಷ್ಯದೊಡನೆ ಒಪ್ಪಂದ ಮಾಡಿಕೊಂಡೆವು. ಈಗ ಪೂರ್ಣವಾಗಿ ಅಲ್ಲದಿದ್ದರೂ ಗಣನೀಯವಾಗಿ ನಮ್ಮ ಸಂಕಲ್ಪವನ್ನು ಸಾಕಾರಗೊಳಿಸುವ ಸಮಯ ಬಂದಿದೆ. ಸಮಸ್ತ ಜಗತ್ತು ನಿದ್ರಿಸುವ ಮಧ್ಯರಾತ್ರಿಯ ವೇಳೆ ಭಾರತ ಚೈತನ್ಯಗೊಂಡು ಸ್ವಾತಂತ್ರ್ಯಕ್ಕೆ ಹೊರಳುತ್ತಿದೆ. ಚರಿತ್ರೆಯಲ್ಲಿ ಒಂದು ಅಪರೂಪದ ಮುಹೂರ್ತ ಕಾಣಿಸಿಕೊಳ್ಳುತ್ತದೆ; ಆ ಘಳಿಗೆಯಲ್ಲಿ ಹಳೆಯದನ್ನು ಬಿಟ್ಟು ಹೊಸದಕ್ಕೆ ಪದಾರ್ಪಣ ಮಾಡುತ್ತೇವೆ; ಆಗ ಒಂದು ಯುಗ ಮುಗಿದು ದೀರ್ಘಕಾಲದ ದಿಗ್ಭಂಧನದಿಂದ ಒಂದು ದೇಶದ ಆತ್ಮ ಬಿಡುಗಡೆ ಹೊಂದಿ ಮಾತನಾಡತೊಡಗುತ್ತದೆ. ಇಂಥ ಒಂದು ವಿದ್ಯುಕ್ತ ಕ್ಷಣದಲ್ಲಿ ಭಾರತಾಂಬೆಯ, ಮತ್ತವಳ ಪ್ರಜೆಗಳ ಸೇವೆಗೆ, ಅಷ್ಟೇ ಏಕೆ, ವಿಶಾಲವಾದ ಮನುಕುಲದ ಸೇವೆಗೆ ಸಮರ್ಪಿಸಿಕೊಳ್ಳುವ ಪ್ರತಿಜ್ಞೆ ಮಾಡಬೇಕಾದುದು ವಿಹಿತವಾಗಿದೆ.<br /> <br /> ಇತಿಹಾಸದ ಆರಂಭಕಾಲದಲ್ಲಿ ಭಾರತ ತನ್ನ ಅನಂತ ಅನ್ವೇಷಣೆಯಲ್ಲಿ ತೊಡಗಿದ್ದು ಶತಶತಮಾನಗಳಿಂದ ಅವಳ ಸತತ ಪ್ರಯತ್ನದ ಗುರುತುಗಳು ಗೋಚರವಾಗುತ್ತಿವೆ; ಹಾಗೆಯೇ ಅವಳ ಯಶಸ್ಸು ಮತ್ತು ಪರಾಭವದ ಭವ್ಯತೆಯನ್ನೂ ನಾವು ಕಾಣುತ್ತಿದ್ದೇವೆ. ತನ್ನ ಅದೃಷ್ಟದ ದಿನಗಳಲ್ಲೆಂತೊ ಅಂತೆಯೇ ನತದೃಷ್ಟ ದಿನಗಳಲ್ಲೂ ಆಕೆ ತನಗೆ ಚೈತನ್ಯ ನೀಡಿರುವ ಆದರ್ಶಗಳಿಂದ ದೃಷ್ಟಿಯನ್ನು ಬೇರೆಡೆ ಹೊರಳಿಸಿಲ್ಲ.<br /> <br /> ಈ ದಿನ ನಾವು ದುರದೃಷ್ಟಕರವಾದ ಪರ್ವವನ್ನು ಕೊನೆಗಾಣಿಸಿದ್ದೇವೆ ಮತ್ತು ಭಾರತ ಮತ್ತೆ ತನ್ನನ್ನು ತಾನು ಕಂಡುಕೊಳ್ಳುತ್ತಿದ್ದಾಳೆ. ನಾವು ಈ ದಿನ ನಮ್ಮ ಸಾಧನೆಯ ಸಂಭ್ರಮವನ್ನು ಆಚರಿಸುತ್ತಿರುವುದು ಒಂದು ಆರಂಭವಷ್ಟೆ, ಭವಿಷ್ಯತ್ತಿನಲ್ಲಿ ಇನ್ನೂ ಹೆಚ್ಚಿನ ಜಯ ಮತ್ತು ಸಾಧನೆ ನಮ್ಮದಾಗುವುದು. ಈ ಅವಕಾಶವನ್ನು ದೃಢವಾಗಿ ಹಿಡಿಯಲು ಹಾಗೂ ಭವಿಷ್ಯದ ಸವಾಲುಗಳನ್ನು ಸ್ವೀಕರಿಸಲು ನಮಗೆ ಧೈರ್ಯವಿದೆಯೇ?<br /> <br /> ಸ್ವಾತಂತ್ರ್ಯ ಮತ್ತು ಅಧಿಕಾರ ಜವಾಬ್ದಾರಿಯನ್ನು ಹೊತ್ತು ತರುತ್ತದೆ. ಹಾಗೆಯೇ ಸ್ವತಂತ್ರ ಭಾರತದ ಪ್ರಜೆಗಳನ್ನು ಪ್ರತಿನಿಧಿಸುವ ಈ ಸಾರ್ವಭೌಮ ಸದನ ಸಹ ಆ ಜವಾಬ್ದಾರಿಯನ್ನು ಹೊತ್ತಿದೆ. ಸ್ವಾತಂತ್ರ್ಯದ ಉದಯಕ್ಕೆ ಮೊದಲು ನಾವು ಎಷ್ಟೊಂದು ಪ್ರಸವವೇದನೆಯನ್ನು ಅನುಭವಿಸಿದ್ದೇವೆ; ಆ ಸಂಕಟದ ನೆನಪು ನಮ್ಮ ಹೃದಯಗಳಲ್ಲಿ ಇನ್ನೂ ಭಾರವಾಗಿ ಕುಳಿತಿದೆ. ಆದಾಗ್ಯೂ ಭೂತಕಾಲ ಮುಗಿದಿದೆ; ಭವಿಷ್ಯತ್ತು ನಮ್ಮನ್ನು ಕೈಬೀಸಿ ಕರೆಯುತ್ತಿದೆ.<br /> <br /> ಆ ಭವಿಷ್ಯತ್ತಿನಲ್ಲಿ ನಾವು ಆರಾಮವಾಗಿ ವಿರಮಿಸುವಂತಿಲ್ಲ; ಬದಲಿಗೆ ಸತತವಾಗಿ ದುಡಿಯಬೇಕು, ತನ್ಮೂಲಕ ನಾವು ಈಗಾಗಲೇ ಮಾಡಿರುವ, ಇಂದು ಮತ್ತೆ ಮಾಡುತ್ತಿರುವ ಪ್ರತಿಜ್ಞೆಯನ್ನು ಸಾಕಾರಗೊಳಿಸಬೇಕು. ಭಾರತದ ಸೇವೆ ಎಂದರೆ ನೊಂದ ಅಸಂಖ್ಯಾತರ ಸೇವೆಯೇ ಆಗಿದೆ. ಸೇವೆ ಎಂದರೆ ಬಡತನ, ಅಜ್ಞಾನ, ರೋಗ ಮತ್ತು ಅವಕಾಶಗಳ ಅಸಮಾನತೆಯನ್ನು ಹೋಗಲಾಡಿಸುವುದು ಎಂದರ್ಥ.<br /> <br /> ನಮ್ಮ ತಲೆಮಾರಿನಲ್ಲಿ ಮಹಾನ್ ವ್ಯಕ್ತಿಯೊಬ್ಬರಿದ್ದಾರೆ; ಆ ವ್ಯಕ್ತಿಯ ಮಹತ್ವಾಕಾಂಕ್ಷೆಯೆಂದರೆ ಪ್ರತಿಯೊಬ್ಬನ ಕಣ್ಣೀರನ್ನೂ ಒರೆಸುವುದು. ಅದು ನಮ್ಮಿಂದ ಸಾಧ್ಯವಾಗದಿರಬಹುದು; ಆದರೆ ಎಲ್ಲಿಯವರೆಗೆ ನೋವು ಮತ್ತು ಕಣ್ಣೀರು ಇರುತ್ತದೆಯೋ ಅಲ್ಲಿಯವರೆಗೆ ನಮ್ಮ ಕರ್ತವ್ಯ ಮುಗಿದಂತಾಗುವುದಿಲ್ಲ.<br /> <br /> ಹಾಗಾಗಿ ನಾವು ದುಡಿಯಬೇಕು, ಶ್ರಮವಹಿಸಿ ದುಡಿಯಬೇಕು. ನಾವು ಪ್ರತಿನಿಧಿಸುವಂಥ ಭಾರತದ ಜನತೆಗೆ ವಿನಂತಿ ಮಾಡಿಕೊಳ್ಳೋಣ : ಈ ಅಸೀಮ ಸಾಹಸದಲ್ಲಿ ನಂಬಿಕೆ ಹಾಗೂ ಆತ್ಮವಿಶ್ವಾಸದಿಂದ ನಮ್ಮಂದಿಗೆ ಕೈಜೋಡಿಸಿ ಎಂದು. ಸಣ್ಣತನದ ಮಾತುಗಳಿಗೆ, ವಿನಾಶಕಾರಿಯಾದ ಟೀಕೆಗಳಿಗೆ ಇದು ಸಮಯವಲ್ಲ; ಇತರರನ್ನು ದ್ವೇಷಿಸುವ ಹಾಗೂ ದೂಷಿಸುವ ಕಾಲವೂ ಇದಲ್ಲ. ಸ್ವತಂತ್ರ ಭಾರತದ ಘನವಾದ ಸೌಧವನ್ನು ನಿರ್ಮಿಸುವ ಮೂಲಕ ಮಾತೆಯ ಮಕ್ಕಳೆಲ್ಲ ವಾಸಿಸುವಂತೆ ಮಾಡಬೇಕು.<br /> <br /> ಅದನ್ನು ಸಾಕಾರಗೊಳಿಸುವ ಘಳಿಗೆ ಈಗ ಕೂಡಿ ಬಂದಿದೆ. ಸುದೀರ್ಘವಾದ ನಿದ್ರೆ ಮತ್ತು ಹೋರಾಟ, ಎಚ್ಚರ, ಚೈತನ್ಯ, ಸ್ವಾತಂತ್ರ್ಯ- ಎಲ್ಲವನ್ನೂ ಹೊತ್ತ ಘಳಿಗೆ ಇದು. ಚರಿತ್ರೆ ಹೊಸದಾಗಿ ಅನಾವರಣಗೊಂಡಿದೆ. ಈ ಚರಿತ್ರೆಯಲ್ಲಿ ನಾವು ಬಾಳಬೇಕು, ಪಾತ್ರವಹಿಸಬೇಕು; ಇತರರು ಅದರ ಬಗ್ಗೆ ಬರೆಯಬೇಕು.<br /> <br /> ಭಾರತದಲ್ಲಿರುವ ನಮಗೆ, ಏಷ್ಯಾದ ಎಲ್ಲ ಜನರಿಗೆ, ಅಷ್ಟೇ ಏಕೆ ಜಗತ್ತಿನ ಜನರಿಗೆಲ್ಲ ಇದು ಒಂದು ಮಹತ್ವದ ಕ್ಷಣ. ಸ್ವಾತಂತ್ರ್ಯವೆಂಬ ನಕ್ಷತ್ರ ಪೂರ್ವದಲ್ಲಿ ಉದಯವಾಗುತ್ತಿದೆ. ಹೊಸ ಭರವಸೆ ಮೂಡುತ್ತಿದೆ; ಬಹಳ ಕಾಲದಿಂದ ಧ್ಯಾನಿಸುತ್ತಿದ್ದ ಹೊಸ ಕಾಣ್ಕೆ ಸಾಕಾರಗೊಳ್ಳುತ್ತಿದೆ. ಆ ನಕ್ಷತ್ರ ಎಂದೂ ಮುಳುಗದಿರಲಿ, ಭರವಸೆ ಎಂದೂ ಹುಸಿಯಾಗದಿರಲಿ.<br /> <br /> ಇಂದಿನ ದಿನ ನಾವು ಮೊದಲು ನೆನೆಯಬೇಕಾದದ್ದು ನಮ್ಮ ಸ್ವಾತಂತ್ರ್ಯ ಶಿಲ್ಪಿ, ರಾಷ್ಟ್ರಪಿತ ಅವರನ್ನು. ಅವರು ಭಾರತದ ಪ್ರಾಚೀನ ಚೈತನ್ಯದ ಪ್ರತೀಕವಾಗಿ ಸ್ವಾತಂತ್ರ್ಯದ ಜ್ಯೋತಿಯನ್ನು ಎತ್ತಿ ಹಿಡಿದರು; ನಮ್ಮನ್ನು ಸುತ್ತುವರೆದಿದ್ದ ಕತ್ತಲನ್ನು ಹೋಗಲಾಡಿಸಿದರು. ಅನೇಕ ವೇಳೆ ನಾವು ಅಂಥ ಮಹಾನ್ ವ್ಯಕ್ತಿಯ ಯೋಗ್ಯ ಅನುಯಾಯಿಗಳಾಗಿಲ್ಲ. ಆತನ ಸಂದೇಶದಿಂದ ದೂರ ಸರಿದಿದ್ದೇವೆ. ಆದರೆ ಒಂದಂತೂ ನಿಜ: ನಾವಷ್ಟೇ ಅಲ್ಲ, ಇನ್ನು ಮುಂದೆ ಬರಲಿರುವ ಹಲವು ತಲೆಮಾರುಗಳ ಜನ ಆತನ ಸಂದೇಶವನ್ನು ನೆನೆಯುತ್ತಾರೆ, ತಮ್ಮ ಹೃದಯಗಳಲ್ಲಿ ಭಾರತದ ಈ ಮಹಾನ್ ಪುರುಷನ ರೂಪನ್ನು ಅಚ್ಚೊತ್ತಿಕೊಳ್ಳುತ್ತಾರೆ.<br /> <br /> ಭವಿಷ್ಯ ನಮ್ಮನ್ನು ಕೈಬೀಸಿ ಕರೆಯುತ್ತಿದೆ. ನಾವು ಎತ್ತ ಹೋಗಬೇಕು ಮತ್ತು ನಮ್ಮ ಪ್ರಯತ್ನ ಎತ್ತ ಸಾಗಬೇಕು? ಭಾರತದ ಜನಸಾಮಾನ್ಯನಿಗೆ, ರೈತರಿಗೆ ಹಾಗೂ ಕಾರ್ಮಿಕರಿಗೆ ಸ್ವಾತಂತ್ರ್ಯ ಮತ್ತು ಅವಕಾಶವನ್ನು ಕಲ್ಪಿಸುವುದು; ಬಡತನ, ಅಜ್ಞಾನ ಹಾಗೂ ರೋಗರುಜಿನದ ವಿರುದ್ಧ ಹೋರಾಡಿ ಅವನ್ನು ಕೊನೆಗೊಳಿಸುವುದು; ಪ್ರಗತಿಪರವೂ, ಸಮೃದ್ಧವೂ, ಜನತಂತ್ರವೂ ಆದ ರಾಷ್ಟ್ರವನ್ನು ನಿರ್ಮಿಸುವುದು; ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಂಸ್ಥೆಗಳನ್ನು ನಿರ್ಮಿಸಿ ತನ್ಮೂಲಕ ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಗೆ ನ್ಯಾಯಯುತವೂ ಸಂಪೂರ್ಣವೂ ಆದ ಬದುಕನ್ನು ದೊರಕಿಸಿಕೊಡುವುದು.<br /> <br /> ನಮ್ಮ ಮುಂದೆ ಇರುವುದು ಶ್ರಮದ ದುಡಿಮೆ. ಭಾರತದ ಜನತೆಗೆ ಸುಖಸಮೃದ್ಧಿಯ ಬದುಕನ್ನು ದೊರಕಿಸುವ ತನಕ ನಮಗಾರಿಗೂ ವಿಶ್ರಾಂತಿ ಎಂಬುದಿಲ್ಲ. ಒಂದು ದಿಟ್ಟ ಹೆಜ್ಜೆಯನ್ನಿಟ್ಟಿರುವ ಮಹಾನ್ ರಾಷ್ಟ್ರದ ಪ್ರಜೆಗಳು ನಾವು; ಹಾಗಾಗಿ, ಆ ದೊಡ್ಡ ಗೌರವಕ್ಕೆ ಅನುಗುಣವಾಗಿ ಬದುಕಬೇಕಾಗಿದೆ.<br /> <br /> ನಾವು ಯಾವ ಧರ್ಮಕ್ಕೇ ಸೇರಿದವರಾಗಿರಲಿ, ಸಮಾನ ಅಧಿಕಾರ, ಪ್ರತಿಷ್ಠೆ ಹಾಗೂ ಹೊಣೆಗಾರಿಕೆಯುಳ್ಳ ಭಾರತಾಂಬೆಯ ಮಕ್ಕಳು ನಾವು. ಮತಾಂಧತೆ ಹಾಗೂ ಸಂಕುಚಿತ ಮನೋಭಾವವನ್ನು ಪ್ರೊತ್ಸಾಹಿಸಲು ಸಾಧ್ಯವಿಲ್ಲ; ಏಕೆಂದರೆ ಆಲೋಚನೆಯಲ್ಲಾಗಲೀ ಅಥವಾ ಕ್ರಿಯೆಯಲ್ಲಾಗಲೀ ಸಂಕುಚಿತ ಮನೋಭಾವವನ್ನು ಹೊಂದಿದ ಜನರಿರುವ ರಾಷ್ಟ್ರ ದೊಡ್ಡರಾಷ್ಟ್ರವಾಗಲು ಸಾಧ್ಯವಿಲ್ಲ.<br /> <br /> ಅಮರವೂ, ನವ ನವೋನ್ಮೇಷಶಾಲಿಯೂ ಆದ ನಮ್ಮ ಮಾತೃಭೂಮಿಗೆ, ನಮ್ಮ ಹೃದಯಾಂತರಾಳದ ನಮನಗಳನ್ನು ಸಲ್ಲಿಸುತ್ತಾ ಆ ಮಾತೆಯ ಸೇವೆಗಾಗಿ ಮತ್ತೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ'.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>