ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರ ಪ್ರಶಸ್ತಿಗೆ ‘ಬಹಿಷ್ಕಾರ’ದ ಬಿಸಿ

11 ಮಂದಿಗಷ್ಟೇ ರಾಷ್ಟ್ರಪತಿಯಿಂದ ಪುರಸ್ಕಾರ: ಕಲಾವಿದರ ಆಕ್ರೋಶ
Last Updated 3 ಮೇ 2018, 19:46 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗುರುವಾರ ಪ್ರದಾನ ಮಾಡಲಾಗಿದೆ. ಆದರೆ, ಪ್ರಶಸ್ತಿಗೆ ಪಾತ್ರರಾದವರಲ್ಲಿ 11 ಮಂದಿಗೆ ಮಾತ್ರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಪ್ರಶಸ್ತಿ ಪ್ರದಾನ ಮಾಡಿದ್ದು ಪ್ರತಿಭಟನೆಗೆ ಕಾರಣವಾಯಿತು.

ವಿನೋದ್‌ ಖನ್ನಾ ಅವರಿಗೆ ಮರಣೋತ್ತರವಾಗಿ ದಾದಾ ಸಾಹೇಬ್‌ ಫಾಲ್ಕೆ ಮತ್ತು ಶ್ರೀದೇವಿ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರದಾನ ಮಾಡಿದರು.

ಪ್ರಶಸ್ತಿಯ 64 ವರ್ಷಗಳ ಇತಿಹಾಸದಲ್ಲಿ ಪ್ರಶಸ್ತಿ ಪ್ರದಾನ ಶಿಷ್ಟಾಚಾರವನ್ನು ಬದಲಾಯಿಸಿದ್ದು ಪುರಸ್ಕೃತರ ಆಕ್ರೋಶಕ್ಕೆ ಕಾರಣವಾಯಿತು.

‘ರಾಷ್ಟ್ರಪತಿಯವರು ಯಾವುದೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗರಿಷ್ಠ ಒಂದು ತಾಸು ಮಾತ್ರ ಭಾಗವಹಿಸುತ್ತಾರೆ ಎಂಬುದನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಮೊದಲೇ ತಿಳಿಸಲಾಗಿತ್ತು. ಹೀಗಿರುವಾಗ ಕೊನೆಯ ಕ್ಷಣದಲ್ಲಿ ಇಂತಹ ಗೊಂದಲ ಯಾಕೆ ಸೃಷ್ಟಿಯಾಯಿತು? ಕೋವಿಂದ್‌ ಅವರು ಅಧಿಕಾರ ಸ್ವೀಕರಿಸಿದಾಗಿನಿಂದಲೇ ಈ ಕ್ರಮವನ್ನು ಅನುಸರಿಸಲಾಗುತ್ತಿದೆ’ ಎಂದು ರಾಷ್ಟ್ರಪತಿಯವರ ಮಾಧ್ಯಮ ಕಾರ್ಯದರ್ಶಿ ಅಶೋಕ್‌ ಮಲಿಕ್‌ ಹೇಳಿದ್ದಾರೆ.

ವಿಜ್ಞಾನ ಭವನದಲ್ಲಿ ಎರಡು ಹಂತದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಗುರುವಾರ ಸಂಜೆ 4 ಗಂಟೆಗೆ ಆರಂಭವಾಗುವ ಮೊದಲ ಹಂತದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ಮತ್ತು ರಾಜ್ಯ ಖಾತೆಯ ಸಚಿವ ರಾಜ್ಯವರ್ಧನ ರಾಥೋಡ್‌ ಅವರು ಪ್ರಶಸ್ತಿಗಳನ್ನು ನೀಡಲಿದ್ದಾರೆ. 5.30ಕ್ಕೆ ಆರಂಭವಾಗುವ ಎರಡನೇ ಹಂತದಲ್ಲಿ ರಾಷ್ಟ್ರಪತಿ ಪ್ರಶಸ್ತಿ ನೀಡುವರು ಎಂದು ಸಚಿವಾಲಯ ತಿಳಿಸಿತ್ತು.

ಎಲ್ಲ ಪುರಸ್ಕೃತರಿಗೂ ರಾಷ್ಟ್ರಪತಿ ಅವರೇ ಪ್ರಶಸ್ತಿ ನೀಡುವುದು ವಾಡಿಕೆ.

ರಾಷ್ಟ್ರಪತಿಯವರು 11 ಮಂದಿಗೆ ಮಾತ್ರ ಪ್ರಶಸ್ತಿ ನೀಡಲಿದ್ದಾರೆ ಎಂಬುದು ಪ್ರಶಸ್ತಿ ಘೋಷಣೆಯಾದ ವ್ಯಕ್ತಿಗಳ ಅತೃಪ್ತಿಗೆ ಕಾರಣವಾಯಿತು. ಹಲವು ಮಂದಿ ಜತೆಯಾಗಿ ರಾಷ್ಟ್ರಪತಿ ಕಚೇರಿ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ. ‘ರಾಷ್ಟ್ರಪತಿಯವರು ಎಲ್ಲರಿಗೂ ಪ್ರಶಸ್ತಿ ನೀಡುವುದಿಲ್ಲ ಎಂಬ ಸುದ್ದಿ ತಿಳಿದಾಗ ನಮ್ಮಲ್ಲಿ ಪ್ರಶಸ್ತಿ ಪಡೆದ ಖುಷಿಗಿಂತ ವಿಷಣ್ಣತೆ ಮೂಡಿದೆ’ ಎಂದು ಈ ಪತ್ರದಲ್ಲಿ ಹೇಳಲಾಗಿದೆ.

‘ಗರಿಷ್ಠ ಮಟ್ಟದ ಶಿಷ್ಟಾಚಾರ ಪಾಲಿಸುವ ಸಂಸ್ಥೆ ಅಥವಾ ಸಮಾರಂಭವೊಂದು ಕೊನೆಯ ಕ್ಷಣದಲ್ಲಿ ಕಾರ್ಯಕ್ರಮವನ್ನು ಬದಲಾಯಿಸುವ ಮಾಹಿತಿ ಕೊಟ್ಟಿರುವುದು ನಂಬಿಕೆದ್ರೋಹವಾಗಿದೆ. 65 ವರ್ಷಗಳ ಪರಂಪರೆಯನ್ನು ಕ್ಷಣಾರ್ಧದಲ್ಲಿ ಬದಲಾಯಿಸಿರುವುದು ದುರದೃಷ್ಟಕರ’ ಎಂದು ಪತ್ರದಲ್ಲಿ ಹೇಳಲಾಗಿದೆ. 70ಕ್ಕೂ ಹೆಚ್ಚು ಕಲಾವಿದರು ಪತ್ರಕ್ಕೆ ಸಹಿ ಮಾಡಿದ್ದಾರೆ.

ಹಿರಿಯ ಗಾಯಕ ಕೆ.ಜೆ. ಯೇಸುದಾಸ್‌, ಈ ವರ್ಷದ ಅತ್ಯುತ್ತಮ ಬಂಗಾಳಿ ಸಿನಿಮಾ ಪ್ರಶಸ್ತಿಗೆ ಪಾತ್ರವಾದ ‘ನಗರಕೀರ್ತನ್‌’ ಸಿನಿಮಾ ನಿರ್ದೇಶಕ ಕೌಶಿಕ್‌ ಗಂಗೂಲಿ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಆಯ್ಕೆಯಾಗಿರುವ ಫಹದ್‌ ಫಾಜಿಲ್‌ ಮುಂತಾದವರು ಪತ್ರಕ್ಕೆ ಸಹಿ ಮಾಡಿದ್ದಾರೆ.

‘ದೇಶದ ವಿವಿಧ ಭಾಗಗಳನ್ನು ಪ್ರತಿನಿಧಿಸುವ ನಮಗೆ ರಾಷ್ಟ್ರಪತಿ ಕೈಯಿಂದ ಪ್ರಶಸ್ತಿ ಪ‍ಡೆಯುವುದು ಒಂದು ಗೌರವ. ರಾಷ್ಟ್ರಪತಿ ಅಲ್ಲದಿದ್ದರೆ ಉಪರಾಷ್ಟ್ರಪತಿಯವರಾದರೂ ಉಳಿದ ಪ್ರಶಸ್ತಿಗಳನ್ನು ನೀಡಬೇಕಿತ್ತು’ ಎಂದು ಅತ್ಯುತ್ತಮ ಕನ್ನಡ ಸಿನಿಮಾ ‘ಹೆಬ್ಬೆಟ್‌ ರಾಮಕ್ಕ’ ನಿರ್ದೇಶಕ ಎನ್‌.ಆರ್.ನಂಜುಂಡೇಗೌಡ ಹೇಳಿದ್ದಾರೆ.

**

ಶ್ರೀದೇವಿ ನೆನೆದ ಬೋನಿ ಕಪೂರ್

‘ಮಾಮ್’ ಚಿತ್ರದ ನಟನೆಗಾಗಿ ಮರಣೋತ್ತರವಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಶ್ರೀದೇವಿ ಪರವಾಗಿ ಅವರ ಪತಿ ಬೋನಿ ಕಪೂರ್, ಆ ಗೌರವವನ್ನು ಸ್ವೀಕರಿಸಿದರು. ‘ಇದು ನಮ್ಮ ಕುಟುಂಬಕ್ಕೆ ಮರೆಯಲಾಗದ ಕ್ಷಣ. ಈ ಕ್ಷಣವನ್ನು ಸಂಭ್ರಮಿಸಲು ಶ್ರೀದೇವಿ ನಮ್ಮೊಂದಿಗೆ ಇಲ್ಲದಿರುವುದಕ್ಕೆ ತೀರಾ ಬೇಸರವಾಗುತ್ತಿದೆ. ಆಕೆಯ ಅನುಪಸ್ಥಿತಿ ನಮ್ಮನ್ನು ಕಾಡುತ್ತಿದೆ’ ಎಂದು ಬೋನಿ ಕಪೂರ್ ಹೇಳಿದರು.

ನಟ ವಿನೋದ್ ಖನ್ನಾ ಪರವಾಗಿ ಅವರ ಮಗ ಅಕ್ಷಯ್ ಖನ್ನಾ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಸ್ವೀಕರಿಸಿದರು. ‘ಇದು ಅತ್ಯಂತ ಭಾವನಾತ್ಮಕವಾದ ಕ್ಷಣ. ಈ ಪ್ರಶಸ್ತಿಯನ್ನು ಸ್ವೀಕರಿಸಲು ಅಪ್ಪ ಬದುಕಿರಬೇಕಿತ್ತು’ ಎಂದು ಅಕ್ಷಯ್ ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT