ಬೆಂಗಳೂರು: ಪರಿಸರಕ್ಕೆ ಪೂರಕವಾದ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ ನೀರು ಕುಡಿದು ಎಸೆಯುವ ಪ್ಲಾಸ್ಟಿಕ್ ಬಾಟಲ್ಗಳು ಸುಲಭವಾಗಿ ಪುಡಿಯಾಗಲಿವೆ.
ರಾಜ್ಯ ಕ್ರಿಕೆಟ್ ಸಂಸ್ಥೆಗೆ(ಕೆಎಸ್ಸಿಎ) ರಿಲಯನ್ಸ್ ಇಂಡಸ್ಟ್ರೀಸ್ ನೀಡಿರುವ ಯಂತ್ರವು ಪ್ಲಾಸ್ಟಿಕ್ ಬಾಟಲ್ಗಳನ್ನು ಸಣ್ಣ ತುಂಡುಗಳಾಗಿ ಪರಿವರ್ತಿಸುತ್ತದೆ. ಇವುಗಳನ್ನು ಕ್ಯಾಪ್, ಟಿ–ಶರ್ಟ್ ಮತ್ತು ಕ್ರೀಡಾ ಶೂಗಳನ್ನು ತಯಾರಿಸಲು ಬಳಸಲಾಗುತ್ತದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕೆಎಸ್ಸಿಎ ಅಧ್ಯಕ್ಷ ರೋಜರ್ ಬಿನ್ನಿ ಯಂತ್ರವನ್ನು ಉದ್ಘಾಟಿಸಿದರು.
‘ದೇಶದ ಕ್ರಿಕೆಟ್ ಅಂಗಣಗಳ ಪೈಕಿ ಈ ಯಂತ್ರವನ್ನು ಅಳವಡಿಸಿದ್ದು ಇಲ್ಲೇ ಮೊದಲು. ಬಾಟಲ್ಗಳನ್ನು ಯಂತ್ರದೊಳಗೆ ಹಾಕುವವರು ತಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ದಾಖಲಿಸಲು ಅವಕಾಶವಿದೆ. ಇದರ ಆಧಾರದಲ್ಲಿ ಅವರಿಗೆ ಪೇಟಿಎಂನಿಂದ ಉಡುಗೊರೆ ರೂಪದಲ್ಲಿ ಹಣ ಸಿಗುತ್ತದೆ’ ಎಂದು ಕೆಎಸ್ಸಿಎ ವಕ್ತಾರ ವಿನಯ ಮೃತ್ಯುಂಜಯ ತಿಳಿಸಿದರು.
ಉಪಾಧ್ಯಕ್ಷ ಜೆ.ಅಭಿರಾಮ್, ಜಂಟಿ ಕಾರ್ಯದರ್ಶಿ ಶಾವಿರ್ ತಾರಾಪುರ್ ಮತ್ತಿತರರು ಇದ್ದರು.