ನವಿ ಮುಂಬೈ: ಗಾಯದಿಂದ ಗುಣಮುಖರಾಗಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಡಿ.ವೈ.ಪಾಟೀಲ ಟಿ–20 ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಮ್ಮೆ ಗರ್ಜಿಸಿದ್ದಾರೆ.
ಬಿಪಿಸಿಎಲ್ ಎದುರಿನ ಸೆಮಿಫೈನಲ್ನಲ್ಲಿ ಹಾರ್ದಿಕ್ 55 ಎಸೆತಗಳಲ್ಲಿ ಅಜೇಯ 158ರನ್ ದಾಖಲಿಸಿದ್ದಾರೆ. ಅವರ ಅಬ್ಬರದ ಶತಕದ ನೆರವಿನಿಂದ ರಿಲಯನ್ಸ್ ಒನ್ ತಂಡ 104ರನ್ಗಳಿಂದ ಜಯಭೇರಿ ಮೊಳಗಿಸಿದೆ.
ಮೊದಲು ಬ್ಯಾಟ್ ಮಾಡಿದ ರಿಲಯನ್ಸ್ ತಂಡ 20 ಓವರ್ಗಳಲ್ಲಿ ನಾಲ್ಕು ವಿಕೆಟ್ಗೆ 238ರನ್ ಕಲೆಹಾಕಿತು. ಬಲಗೈ ಬ್ಯಾಟ್ಸ್ಮನ್ ಹಾರ್ದಿಕ್, ಎದುರಾಳಿ ಬೌಲರ್ಗಳಾದ ಸಂದೀಪ್ ಶರ್ಮಾ, ಶಿವಂ ದುಬೆ ಮತ್ತು ರಾಹುಲ್ ತ್ರಿಪಾಠಿ ಅವರನ್ನು ಮನಬಂದಂತೆ ದಂಡಿಸಿದರು.
ಸಿಕ್ಸರ್ಗಳ (20) ಮೂಲಕವೇ 120ರನ್ ಬಾರಿಸಿದ ಅವರು ಆರು ಬೌಂಡರಿಗಳನ್ನೂ ಸಿಡಿಸಿದರು.
ಗುರಿ ಬೆನ್ನಟ್ಟಿದ ಬಿಪಿಸಿಎಲ್ 134ರನ್ಗಳಿಗೆ ಆಲೌಟ್ ಆಯಿತು. ಒಂದು ಓವರ್ ಬೌಲ್ ಮಾಡಿದ ಪಾಂಡ್ಯ ಆರು ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಕಬಳಿಸಿದರು. ರಿಲಯನ್ಸ್ ತಂಡದಲ್ಲಿ ಆಡಿದ ಭುವನೇಶ್ವರ್ ಕುಮಾರ್ ಕೂಡ ಒಂದು ವಿಕೆಟ್ ಉರುಳಿಸಿದರು.
ಮಂಗಳವಾರ ನಡೆದಿದ್ದ ಆರ್ಸಿಪಿ ಎದುರಿನ ಲೀಗ್ ಪಂದ್ಯದಲ್ಲಿ ಹಾರ್ದಿಕ್ ಅವರು 39 ಎಸೆತಗಳಲ್ಲಿ 105ರನ್ ಬಾರಿಸಿ ಗಮನ ಸೆಳೆದಿದ್ದರು.