ರಾಂಚಿ: ಇಂಗ್ಲೆಂಡ್ ತಂಡದ ವಿರುದ್ಧ ರಾಂಚಿಯಲ್ಲಿ ಫೆಬ್ರುವರಿ 23ರಂದು ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕೆ ಕೆ.ಎಲ್.ರಾಹುಲ್ ಅವರು ಮರಳಲಿದ್ದು, ವೇಗಿ ಜಸ್ಪ್ರಿತ್ ಬೂಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
'ತಂಡವು ನಾಳೆ ರಾಂಚಿಗೆ ಪ್ರಯಾಣ ಬೆಳೆಸಲಿದೆ. ರಾಹುಲ್ ಬಹುತೇಕ ಫಿಟ್ ಆಗಿದ್ದು, ಅವರೂ ತಂಡದೊಂದಿಗೆ ತೆರಳಲಿದ್ದಾರೆ. ಬೂಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಬೂಮ್ರಾ ಮೊದಲ ಮೂರು ಪಂದ್ಯಗಳಲ್ಲಿ 80.5 ಓವರ್ ಬೌಲಿಂಗ್ ಮಾಡಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಟೂರ್ನಿಯಲ್ಲಿ ಹೆಚ್ಚು (17) ವಿಕೆಟ್ ಕಬಳಿಸಿದ ಬೌಲರ್ ಎನಿಸಿರುವ ಅವರು, ಭಾರತ ತಂಡವು ಐದು ಪಂದ್ಯಗಳ ಸದ್ಯ 2–1 ಅಂತರದಿಂದ ಮುನ್ನಡೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕರ್ತವ್ಯದ ಹೊಣೆ ನಿರ್ವಹಣೆಯ ಭಾಗವಾಗಿ ವೇಗಿ ಮೊಹಮ್ಮದ್ ಸಿರಾಜ್ ಅವರಿಗೂ ಎರಡನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು.
ತೊಡೆಯ ಸ್ನಾಯು ನೋವಿನಿಂದ ಬಳಲುತ್ತಿದ್ದ ರಾಹುಲ್, ಎರಡು ಹಾಗೂ ಮೂರನೇ ಟೆಸ್ಟ್ಗೆ ಅಲಭ್ಯರಾಗಿದ್ದರು. ಅವರ ಬದಲು ದೇವದತ್ತ ಪಡಿಕ್ಕಲ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿತ್ತು. ಆದರೆ, ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ.
ನಾಲ್ಕು ತಿಂಗಳ ಕಾಲ ತಂಡದಿಂದ ಹೊರಗುಳಿದಿದ್ದ ರಾಹುಲ್, ಪುನರಾಗಮನದ ನಂತರ ಮೂರೂ ಮಾದರಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಎರಡು ಟೆಸ್ಟ್ಗಳ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿ ಶತಕ ಹೊಡೆದ ಏಕೈಕ ಆಟಗಾರ ಎನಿಸಿದ್ದರು.
ಭಾರತ ತಂಡಕ್ಕೆ ಸರಣಿ ಗೆಲ್ಲುವ ಅವಕಾಶ
ಹೈದರಾಬಾದ್ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಮುಗ್ಗರಿಸಿದ್ದ ಭಾರತ, ನಂತರ ವಿಶಾಖಪಟ್ಟಣ ಮತ್ತು ರಾಜ್ಕೋಟ್ನಲ್ಲಿ ನಡೆದ ಎರಡು, ಮೂರನೇ ಪಂದ್ಯದಲ್ಲಿ ಜಯ ಸಾಧಿಸಿ, ಸರಣಿಯಲ್ಲಿ 2–1 ಅಂತರದ ಮುನ್ನಡೆ ಸಾಧಿಸಿದೆ.
ಹೀಗಾಗಿ ರಾಂಚಿಯಲ್ಲಿ ನಡೆಯುವ ನಾಲ್ಕನೇ ಪಂದ್ಯವನ್ನು ಗೆದ್ದು, ಸರಣಿ ವಶಪಡಿಸಿಕೊಳ್ಳುವ ಉತ್ತಮ ಅವಕಾಶ ಟೀಂ ಇಂಡಿಯಾಗೆ ಇದೆ. ಅದು ಸಾಧ್ಯವಾಗದಿದ್ದರೆ, ಧರ್ಮಶಾಲಾದಲ್ಲಿ ಮಾರ್ಚ್ 7ರಂದು ಆರಂಭವಾಗುವ ಅಂತಿಮ ಪಂದ್ಯಕ್ಕೆ ಬೂಮ್ರಾ ವಾಪಸ್ ಆಗಲಿದ್ದಾರೆ.