ಮುಂಬೈ: ಭುಜದ ಗಾಯದಿಂದ ಬಳಲುತ್ತಿರುವ ಭಾರತದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್, ಇದೇ ಏಪ್ರಿಲ್ 8 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದ ಅವರು, ಐಪಿಎಲ್ ಸರಣಿಗೂ ಅಲಭ್ಯರಾಗಿದ್ದಾರೆ.
ಮಾರ್ಚ್ 23 ರಂದು ಪುಣೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ವೇಗಿ ಶಾರ್ದುಲ್ ಠಾಕೂರ್ ಬೌಲಿಂಗ್ನಲ್ಲಿ ಜಾನಿ ಬೈಸ್ಟೋ ಹೊಡೆದ ಚೆಂಡನ್ನು ತಡೆಯುವ ಯತ್ನದಲ್ಲಿ ಅಯ್ಯರ್, ಭುಜಕ್ಕೆ ಗಾಯಮಾಡಿಕೊಂಡಿದ್ದರು.
ತೀವ್ರವಾದ ನೋವಿನಿಂದಾಗಿ ಅವರು ಭುಜವನ್ನು ಹಿಡಿದುಕೊಂಡೇ ಮೈದಾನದಿಂದ ಹೊರ ನಡೆದಿದ್ದರು.
‘ಭುಜದ ಗಾಯದಿಂದ ಬಳಲುತ್ತಿರುವ ಶ್ರೇಯಸ್, ಏಪ್ರಿಲ್ 8 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ’ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಶ್ರೇಯಸ್ ಅಯ್ಯರ್ ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ ನಾಲ್ಕು ತಿಂಗಳ ಸಮಯ ಹಿಡಿಯುವ ಸಾಧ್ಯತೆ ಇದೆ.
ಈ ಕುರಿತಂತೆ ಕಳೆದ ವಾರ ಟ್ವೀಟ್ ಮಾಡಿದ್ದ ಅವರು, ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ಹೇಳಿದ್ದರು.
‘ನಾನು ನಿಮ್ಮ ಸಂದೇಶಗಳನ್ನು ಓದುತ್ತಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಆಭಾರಿಯಾಗಿದ್ದೇನೆ. ನಿಮ್ಮೆಲ್ಲರಿಗೂ ಹೃದಯದ ಅಂತರಾಳದಿಂದ ಧನ್ಯವಾದ ಹೇಳುತ್ತೇನೆ’ ಎಂದು ತಿಳಿಸಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಅವರು ಗಾಯಗೊಂಡಿರುವುದರಿಂದ ರಿಷಬ್ ಪಂತ್ಗೆ ನಾಯಕನ ಹೊಣೆ ನೀಡಲಾಗಿದೆ. ಏಪ್ರಿಲ್ 9ರಿಂದ ಐಪಿಎಲ್ ಸರಣಿ ಆರಂಭವಾಗಲಿದೆ.