ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಗಿಂತ ಮುನ್ನ ಅಹಮದಾಬಾದಿನ ಮೊಟೇರಾದಲ್ಲಿ ರಾಷ್ಟ್ರೀಯ ತಂಡದ ಶಿಬಿರ ನಡೆಯುವುದು ಅನುಮಾನವಾಗಿದೆ.
ಯುಎಇಯಲ್ಲಿ ಮುಂದಿನ ತಿಂಗಳು ಐಪಿಎಲ್ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಅದಕ್ಕಾಗಿ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಆದರೆ ಐಪಿಎಲ್ನಲ್ಲಿ ಆಡದಿರುವ ಟೆಸ್ಟ್ ಆಟಗಾರರಾದ ಚೇತೇಶ್ವರ್ ಪೂಜಾರ ಮತ್ತು ಹನುಮವಿಹಾರಿ ಸೇರಿದಂತೆ ಎಲ್ಲ ಆಟಗಾರರಿಗೆ ಮೊಟೇರಾ ಕ್ರೀಡಾಂಗಣದಲ್ಲಿ ಶಿಬಿರ ನಡೆಸಲು ಉದ್ದೇಶಿಸಲಾಗಿತ್ತು.
’ಆಗಸ್ಟ್ 18ರಿಂದ ಸೆಪ್ಟೆಂಬರ್ 4ರವರೆಗೆ ಶಿಬಿರ ನಡೆಸುವ ಉದ್ದೇಶವಿದೆ ಎಂದು ಈಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಇದುವರೆಗೂ ಬಿಸಿಸಿಐನಿಂದ ಯಾವುದೇ ಸೂಚನೆ ಬಂದಿಲ್ಲ‘ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಮೂಲಗಳು ತಿಳಿಸಿವೆ.
ನವೆಂಬರ್ ಅಂತ್ಯದಲ್ಲಿ ಟೆಸ್ಟ್ ಸರಣಿ ಆಡಲು ಭಾರತ ತಂಡವು ಆಸ್ಟ್ರೇಲಿಯಾಕ್ಕೆ ತೆರಳುವುದು. ಅದಕ್ಕೂ ಮುನ್ನ ಆಟಗಾರರಿಗೆ ಅಭ್ಯಾಸಕ್ಕೆ ಅವಕಾಶ ಮಾಡಿಕೊಡುವುದಕ್ಕಾಗಿ ಈ ಶಿಬಿರವನ್ನು ಆಯೋಜಿಸುವ ಚಿಂತನೆ ನಡೆದಿತ್ತು.
ಆದರೆ ಶಿಬಿರದ ನಂತರ ಕೆಲವು ಆಟಗಾರರು ಐಪಿಎಲ್ಗೆ ತೆರಳುವರು. ಉಳಿದವರು ತಮ್ಮ ತವರೂರುಗಳಿಗೆ ಮರಳುವರು. ಈ ಸಂದರ್ಭದಲ್ಲಿ ಹೆಚ್ಚುಪ್ರಯಾಣದಿಂದ ಆರೋಗ್ಯವನ್ನು ಅಪಾಯಕ್ಕೆ ಒಡ್ಡಿದಂತಾಗುತ್ತದೆ ಎಂದೂ ಬಿಸಿಸಿಐ ಯೋಚಿಸುತ್ತಿದೆ. ಆದ್ದರಿಂದ ಇನ್ನೂ ಶಿಬಿರದ ಆಯೋಜನೆ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.