ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶೇ 82.9ರಷ್ಟು ಫಲಿತಾಂಶ

ಎಸ್‌ಎಸ್‌ಎಲ್‌ಸಿ; 21ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಏರಿಕೆ
Last Updated 8 ಮೇ 2018, 13:59 IST
ಅಕ್ಷರ ಗಾತ್ರ

ಮೈಸೂರು: ಎಸ್‌.ಎಸ್‌.ಎಲ್‌.ಸಿ ವಾರ್ಷಿಕ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆ ಶೇ 82.9ರಷ್ಟು ಫಲಿತಾಂಶ ಪಡೆದಿದೆ. ರಾಜ್ಯಮಟ್ಟದಲ್ಲಿ 11ನೇ ಸ್ಥಾನ ಪಡೆದಿದೆ.

ಕಳೆದ ವರ್ಷ ಶೇ 72.03ರಷ್ಟು ಫಲಿ ತಾಂಶ ಪಡೆದು 21ನೇ ಸ್ಥಾನದಲ್ಲಿತ್ತು. ಈ ವರ್ಷ ಶೇ 10.97ರಷ್ಟು ಪ್ರಗತಿ ಕಂಡಿದೆ.

ಎರಡು ವರ್ಷಗಳಿಂದ ದ್ವಿತೀಯ ಪಿಯು ಫಲಿತಾಂಶದಲ್ಲಿ ಜಿಲ್ಲೆಯ ಸಾಧನೆ ಕುಸಿಯುತ್ತ ಬಂದಿದೆ. 2018ರಲ್ಲಿ ಶೇ 59.03ರಷ್ಟು ಫಲಿತಾಂಶ ಪಡೆದು 14ನೇ ಸ್ಥಾನದಲ್ಲಿದ್ದ ಜಿಲ್ಲೆಯು, 2018 ನೇ ಸಾಲಿನಲ್ಲಿ ಶೇ 66.77ರಷ್ಟು ಫಲಿತಾಂಶ ಪಡೆದು 17ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ, ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಫಲಿತಾಂಶದಲ್ಲಿ ಸುಧಾರಣೆ ಕಂಡಿದೆ. 2015ರಲ್ಲಿ 10ನೇ ಸ್ಥಾನದಲ್ಲಿದ್ದ ಜಿಲ್ಲೆಯು 2016ರಲ್ಲಿ 8ನೇ ಸ್ಥಾನಕ್ಕೆ ಏರಿತ್ತು. ಆದರೆ, 2017ರಲ್ಲಿ 21ನೇ ಸ್ಥಾನಕ್ಕೆ ಕುಸಿದಿತ್ತು.

ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಭಾಗದ ಶೇ 87.06ರಷ್ಟು ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದಾರೆ. ನಗರದ ಪ್ರದೇಶದ ಶೇ 79.11ರಷ್ಟು ವಿದ್ಯಾರ್ಥಿ ಗಳು ತೇರ್ಗಡೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 638 ಶಾಲೆಗ ಳಿದ್ದು, ಶೇ. 80ಕ್ಕಿಂತ ಹೆಚ್ಚು ಫಲಿತಾಂಶ ವನ್ನು 414 ಶಾಲೆಗಳು, ಶೇ 60ರಿಂದ 80ರಷ್ಟು ಫಲಿತಾಂಶವನ್ನು 150 ಶಾಲೆಗಳು, ಶೇ 40ರಿಂದ 60ರಷ್ಟು ಫಲಿತಾಂಶವನ್ನು 52 ಹಾಗೂ ಶೇ1ರಿಂದ 40ರಷ್ಟು ಫಲಿತಾಂಶವನ್ನು 22 ಶಾಲೆಗಳು ಪಡೆದಿವೆ.

ಸೋಸಲೆಯ ಆದರ್ಶ ವಿದ್ಯಾಲಯ, ವರಕೋಡಿನ ಮೊರಾರ್ಜಿ ವಸತಿ ಶಾಲೆ ಶೇ 100ರಷ್ಟು ಫಲಿತಾಂಶ ಪಡೆದಿವೆ.

ಪಿರಿಯಾಪಟ್ಟಣ ತಾಲ್ಲೂಕು ಶೇ 92.64ರಷ್ಟು ಫಲಿತಾಂಶ ಪಡೆ ಯುವ ಮೂಲಕ ಮೊದಲ ಸ್ಥಾನ ದಲ್ಲಿದೆ. ಮೈಸೂರು ಗ್ರಾಮೀಣ, ಹುಣಸೂರು, ಎಚ್‌.ಡಿ.ಕೋಟೆ, ನಂಜನಗೂಡು, ಕೆ.ಆರ್‌.ನಗರ, ಮೈಸೂರು ಉತ್ತರ, ಮೈಸೂರು ದಕ್ಷಿಣ ಹಾಗೂ ತಿ.ನರಸೀಪುರ ಆನಂತರದ ಸ್ಥಾನದಲ್ಲಿವೆ.

ಸದ್ವಿದ್ಯಾ ಶಾಲೆಯ ವಿದ್ಯಾರ್ಥಿಗಳಾದ ಎಂ.ಎಸ್‌.ಯಶಸ್‌ 625 ಅಂಕ, ಅದಿತಿ ರಾವ್‌ ಹಾಗೂ ಆರ್‌.ಕೀರ್ತನಾ ತಲಾ 624 ಅಂಕ, ಮರಿಮಲ್ಲಪ್ಪ ಶಾಲೆಯ ಶಿವಾನಿ ಎಂ.ಭಟ್‌ 624 ಅಂಕ ಗಳಿಸಿದ್ದಾರೆ. ಸಂತ ಥಾಮಸ್‌ ಪ್ರೌಢಶಾಲೆಯ ಸ್ಪಂದನಾ ದೇವ್‌, ವಿ.ವಿ.ಎಸ್‌. ಪಂಡಿತ್‌ ನೆಹರೂ ಪ್ರೌಢ ಶಾಲೆಯ ಕೆ.ಆರ್‌.ಶ್ರೀನಂದಿನಿ ತಲಾ 623 ಅಂಕಗಳನ್ನು ಗಳಿಸಿದ್ದಾರೆ.

ಎಸ್‌.ಎಸ್‌.ಎಲ್‌.ಸಿ ಫಲಿತಾಂಶವನ್ನು ಉತ್ತಮಪಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶೇ 50ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳಿಗೆ ತಂಡಗಳನ್ನು ರಚನೆ ಮಾಡಲಾಗಿತ್ತು. ಆ ತಂಡಗಳು ಶಾಲೆಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದವು. 3ರಿಂದ 5 ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಇತರೆ ಮಕ್ಕಳಿಗೆ ವಿಶ್ವಾಸ ಕಿರಣ ಕಾರ್ಯಕ್ರಮದ ಮೂಲಕ ಪೂರಕ ಬೋಧನಾ ಕಲಿಕಾ ಚಟುವಟಿಕೆಗಳನ್ನು ನಡೆಸಲಾಗಿತ್ತು ಎಂದು ಡಿಡಿಪಿಐ ಎಸ್‌.ಮಮತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ವಿಷಯ ವಾರು ಶಿಕ್ಷಕರ ಕೊರತೆ ಇದ್ದಿದ್ದರಿಂದ ಕಳೆದ ವರ್ಷ ಫಲಿತಾಂಶ ಕುಸಿದಿತ್ತು. ಆದರೆ, ಗುಣಾತ್ಮಕವಾಗಿ ಜಿಲ್ಲೆ ಸುಧಾರಿಸಿತ್ತು. ಈ ವರ್ಷ 200 ದಿನಗಳ ಕ್ರಿಯಾಯೋಜನೆ, ಶಾಲಾ ಹಂತದಲ್ಲಿ ಪೋಷಕರ ಸಭೆ ಏರ್ಪಡಿಸಿ ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು ಎಂದರು.

526 ಅಂಕ ಪಡೆದ ಅಂಧ ವಿದ್ಯಾರ್ಥಿ

ತಿಲಕ್‌ ನಗರದಲ್ಲಿರುವ ಅಂಧ ಮಕ್ಕಳ ಸರ್ಕಾರಿ ಪಾಠ ಶಾಲೆಯು ಶೇ 100ರಷ್ಟು ಫಲಿತಾಂಶ ಪಡೆದಿದೆ. ಒಟ್ಟು 5 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆರ್‌.ಪಿ.ಸುಪ್ರಿತ್‌ 526 ಅಂಕ, ಅಶೋಕ 512, ಬಾಲ ಚಂದನ್‌ 505, ಮರಿಯಪ್ಪ 498, ಎಸ್‌.ಎಂ.ರವಿ 467 ಅಂಕಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT