ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದಲ್ಲಿ ವೇಗದ ಬೌಲಿಂಗ್ ವಿಭಾಗ ಬಲಾಢ್ಯವಾಗಿದೆ. ಬ್ಯಾಟಿಂಗ್ ಕೂಡ ಉತ್ತಮವಾಗಿದೆ. ಆದರೆ ದುರ್ಬಲವಾಗಿರುವ ಸ್ಪಿನ್ ಬೌಲಿಂಗ್ ವಿಭಾಗವನ್ನೂ ಬಲಿಷ್ಠಗೊಳಿಸುವುದು ಮುಖ್ಯ ಗುರಿ ಎಂದು ಕೆಎಸ್ಸಿಎ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕವಾದ ಜೆ. ಅಭಿರಾಮ್ ಹೇಳಿದರು.
‘ಸ್ಪಿನ್ನರ್ ಶ್ರೇಯಸ್ ಗೋಪಾಲ್ ರಾಜ್ಯ ತಂಡವನ್ನು ತೊರೆದು ಬೇರೆಡೆ ಹೋಗುತ್ತಿದ್ದಾರೆ. ಬ್ಯಾಟರ್ ಕೆ.ವಿ. ಸಿದ್ಧಾರ್ಥ್ ಕೂಡ ಹೊರನಡೆದಿದ್ದಾರೆ. ಆದ್ದರಿಂದ ಶ್ರೇಯಸ್ ಜಾಗಕ್ಕೆ ಸ್ಪಿನ್ನರ್ ಆಯ್ಕೆ ಮಾಡುವುದು ನಮ್ಮ ಮುಂದಿನ ಸವಾಲಾಗಿದೆ. ಯುವ ಸ್ಪಿನ್ನರ್ಗಳಾದ ಶಶಿಕುಮಾರ್, ರೋಹಿತ್ ಕುಮಾರ್ ಭರವಸೆ
ಮೂಡಿಸಿದ್ದಾರೆ. ಶುಭಾಂಗ್ ಹೆಗಡೆ ಕೂಡ ಇದ್ದಾರೆ‘ ಎಂದು ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದರು.
’ಶ್ರೇಯಸ್, ಸಿದ್ಧಾರ್ಥ್ ಸ್ಥಾನಗಳು ತೆರವಾಗಿವೆ. ಆದ್ದರಿಂದ ಐದು ಮತ್ತು ಆರನೇ ಕ್ರಮಾಂಕದಲ್ಲಿ ಸ್ಥಾನ ಪಡೆಯಲು ಯುವ ಆಟಗಾರರಿಗೆ ಇದು ಸದವಕಾಶ. ಡಿ. ನಿಶ್ಚಲ್ ಈಚೆಗಿನ ಟೂರ್ನಿಗಳಲ್ಲಿ ಉತ್ತಮವಾಗಿ ಆಡುತ್ತಿದ್ದು ಭರವಸೆ ಮೂಡಿಸಿದ್ದಾರೆ. ಅಭಿನವ್ ಮನೋಹರ್ ಟಿ20 ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ. ಅವರು ದೀರ್ಘ ಮಾದರಿಗೂ ಸಿದ್ಧರಾಗಬೇಕು. ವಿಕೆಟ್ಕೀಪಿಂಗ್ ವಿಭಾಗದಲ್ಲಿಯೂ ಕೃತಿಕ್ ಕೃಷ್ಣ, ಸುಜಯ್ ಸತೇರಿ, ಶರತ್ ಶ್ರೀನಿವಾಸ್ ಮತ್ತು ಬಿ.ಆರ್. ಶರತ್ ಆಯ್ಕೆಗಳು ನಮ್ಮ ಮುಂದಿವೆ‘ ಎಂದರು.