‘ನಾನು ಚಿಕ್ಕವನಿದ್ದಾಗ ಕ್ರಿಕೆಟ್ ಆಡುವುದೆಂದರೆ ಪಂಚಪ್ರಾಣವಾಗಿತ್ತು. ಆದರೆ ಮನೆಯಲ್ಲಿ ಆರ್ಥಿಕ ಅನುಕೂಲಗಳು ಕಡಿಮೆ ಇದ್ದವು. ನಮ್ಮ ಮನೆಯ ಹತ್ತಿರ ಮಾಜಿ ಯೋಧ ಪಿ.ಡಿ. ವಾಷಿಂಗ್ಟನ್ ಎಂಬುವವರಿದ್ದರು. ನಾವು ಕ್ರಿಕೆಟ್ ಆಡುತ್ತಿದ್ದ ಮೈದಾನಕ್ಕೆ ಬಂದು ಆಟ ನೋಡುತ್ತಿದ್ದರು. ನನ್ನ ಮೇಲೆ ಅದೇನೋ ವಿಶೇಷ ಪ್ರೀತಿ ಅವರಿಗೆ. ಕ್ರಿಕೆಟ್ ಬ್ಯಾಟು, ಚೆಂಡು, ಕಿಟ್, ಶಾಲೆಯ ಶುಲ್ಕ, ಸಮವಸ್ತ್ರವನ್ನೂ ನೀಡುತ್ತಿದ್ದರು. ತಮ್ಮ ಸ್ಕೂಟರ್, ಸೈಕಲ್ ಮೇಲೆ ಶಾಲೆಗೆ ಕರ್ಕೊಂಡು ಹೋಗುತ್ತಿದ್ದರು. ಅವರ ಪ್ರೋತ್ಸಾಹದಿಂದಾಗಿಯೇ ನಾನು ರಾಜ್ಯ ರಣಜಿ ತಂಡಕ್ಕೆ ಆಯ್ಕೆಯಾಗುವ ಮಟ್ಟಕ್ಕೆ ಬೆಳೆದೆ. ಮುಂದೆ ನನಗೆ ಮಗ ಜನಿಸಿದ. ನಾಮಕರಣ ಶಾಸ್ತ್ರದಲ್ಲಿ ಮಗುವಿನ ಕಿವಿಯಲ್ಲಿ ಪದ್ಧತಿಗಾಗಿ ಶ್ರೀನಿವಾಸನ್ ಎಂದು ದೇವರನಾಮ ಉಸುರಿದೆ. ಆದರೆ ಆಮೇಲೆ ವಾಷಿಂಗ್ಟನ್ ಎಂದೇ ಕರೆದೆ’ ಎಂದು ಸುಂದರ್ ಹೇಳುತ್ತಾರೆ.