ಕೊಲಂಬೊ: ಮುಂಬೈನಲ್ಲಿ 2011ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯವನ್ನು ಭಾರತಕ್ಕೆ ಶ್ರೀಲಂಕಾದ ಎರಡು ಪಾರ್ಟಿಗಳು ಸೇರಿ ‘ಮಾರಾಟ’ ಮಾಡಿದ್ದವು ಎಂದು ಆರೋಪಿಸಿದ್ದ ಮಾಜಿ ಸಚಿವ ಈಗ ಅದನ್ನು ಮಾತು ಬದಲಿಸಿದ್ದಾರೆ.
ತಾವು ಅಂದು ನೀಡಿದ ಹೇಳಿಕೆಯಲ್ಲಿ ಮಾರಾಟವಾಗಿರುವ ’ಅನುಮಾನ’ ಎಂದು ಹೇಳಿದ್ದಾಗಿ ಶ್ರೀಲಂಕಾದ ಮಾಜಿ ಸಚಿವ ಮಹಿಂದಾನಂದ ಅಲುತಗಮಗೆ ಹೇಳಿದ್ದಾರೆ.
‘ಅನುಮಾನದ ಆಧಾರದಲ್ಲಿ ಅಂದು ಆರೋಪಿಸಿದ್ದೆ. ಆದರೆ ಅದರ ಪರಿಹಾರಕ್ಕಾಗಿ ಕೂಲಂಕಷ ತನಿಖೆ ಮಾಡಬೇಕು. ನಾನು ಪೊಲೀಸರಿಗೆ ದೂರು ನೀಡಿರುವ ಪ್ರತಿಯನ್ನು ಐಸಿಸಿಗೆ ನೀಡಿದ್ದೆ’ ಎಂದಿದ್ದಾರೆ.
ಶ್ರೀಲಂಕಾದ ಕೆಲವರು ಸೇರಿ ಆ ಪಂದ್ಯವನ್ನು ಭಾರತಕ್ಕೆ ‘ಮಾರಾಟ’ ಮಾಡಿದ್ದರು. ಅದರ ಸಮಗ್ರ ತನಿಖೆ ನಡೆಸಬೇಕು ಎಂದು ಹೋದ ವಾರವಷ್ಟೇ ಮಹಿದಾನಂದ ಹೇಳಿದ್ದರು.
ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಅನುಭವಿ ಆಟಗಾರರಾದ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ‘ಸಾಕ್ಷ್ಯ ಒದಗಿಸಿ ಮಾತನಾಡಿ’ ಎಂದಿದ್ದರು. 2011ರಲ್ಲಿ ಆಡಿದ್ದ ಲಂಕಾ ತಂಡಕ್ಕೆ ಸಂಗಕ್ಕಾರ ನಾಯಕತ್ವ ವಹಿಸಿದ್ದರು. ಜಯವರ್ಧನೆ ಆ ಪಂದ್ಯದಲ್ಲಿ ಆಡಿದ್ದರು. ಮಹಿದಾನಂದ ಆಗ ಲಂಕೆಯ ಕ್ರೀಡಾ ಸಚಿವರಾಗಿದ್ದರು.