ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ ತಾಲ್ಲೂಕು ಕಡಿಮೆ ಫಲಿತಾಂಶ

ಎಸ್ಸೆಸ್ಸೆಲ್ಸಿ; 28ನೇ ಸ್ಥಾನಕ್ಕೆ ಕುಸಿದ ಜಿಲ್ಲೆ; ಶೇ 71.57ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಮದ್ದೂರು ಪ್ರಥಮ
Last Updated 8 ಮೇ 2018, 13:44 IST
ಅಕ್ಷರ ಗಾತ್ರ

ಮಂಡ್ಯ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಜಿಲ್ಲೆ 28ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ ಶೇ 71.73ರಷ್ಟು ಫಲಿತಾಂಶ ಪಡೆದು 23ನೇ ಸ್ಥಾನ ಗಳಿಸಿದ್ದ ಜಿಲ್ಲೆ ಈ ಬಾರಿ 71.57ರಷ್ಟು ಫಲಿತಾಂಶ ಪಡೆದು 28ನೇ ಸ್ಥಾನಕ್ಕೆ ಇಳಿದಿದೆ.

ಪರೀಕ್ಷೆಗೆ ಹಾಜರಾಗಿದ್ದ 19,420 ವಿದ್ಯಾರ್ಥಿಗಳಲ್ಲಿ 13,899 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಬಾಲಕಿಯರು ಮೇಲುಗೈ ಸಾಧಿಸಿದ್ದು, ಪರೀಕ್ಷೆಗೆ ಹಾಜರಾಗಿದ್ದ 9,399 ಬಾಲಕಿಯರಲ್ಲಿ 7,317 ಮಂದಿ ಉತ್ತೀರ್ಣರಾಗಿ ಶೇ 77.85ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 10,021 ಬಾಲಕರಲ್ಲಿ 6,582 ಮಂದಿ ಉತ್ತೀರ್ಣರಾಗಿ ಶೇ 65,68ರಷ್ಟು ಫಲಿತಾಂಶ ಪಡೆದಿದ್ದಾರೆ.

ಕುಸಿದ ಶ್ರೀರಂಗಪಟ್ಟಣ ಫಲಿತಾಂಶ: ಏಳು ತಾಲ್ಲೂಕು, ಎಂಟು ಬ್ಲಾಕ್‌ ಹೊಂದಿರುವ ಜಿಲ್ಲೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಈ ಬಾರಿ ಕಳಪೆ ಫಲಿತಾಂಶ ನೀಡಿದೆ. ಮದ್ದೂರು ತಾಲ್ಲೂಕು ಪ್ರಥಮ ಸ್ಥಾನ ಪಡೆದಿದೆ. ಪಾಂಡವಪುರ 2ನೇ ಸ್ಥಾನ, ಮಂಡ್ಯ ಉತ್ತರ ಬ್ಲಾಕ್‌ 3ನೇ ಸ್ಥಾನ, ಮಳವಳ್ಳಿ 4, ಮಂಡ್ಯ ದಕ್ಷಿಣ 5, ಕೆ.ಆರ್‌.ಪೇಟೆ 6, ನಾಗಮಂಗಲ 7, ಶ್ರೀರಂಗಪಟ್ಟಣ 8ನೇ ಸ್ಥಾನ ಪಡೆದಿವೆ. ಪ್ರತಿ ಬಾರಿ ಉತ್ತಮ ಫಲಿತಾಂಶ ನೀಡುತ್ತಿದ್ದ ಶ್ರೀರಂಗಪಟ್ಟಣ ತಾಲ್ಲೂಕು ಈ ಬಾರಿ ಅತೀ ಕಡಿಮೆ ಶೇ 54.37 ಫಲಿತಾಂಶ ನೀಡಿದೆ.

‘ಈ ಬಾರಿ ಶ್ರೀರಂಗಪಟ್ಟಣ ತಾಲ್ಲೂಕಿನ ವಿದ್ಯಾರ್ಥಿಗಳು ಅತೀ ಕಡಿಮೆ ಫಲಿತಾಂಶ ನೀಡಿರುವುದೇ ಜಿಲ್ಲೆಯ ಸ್ಥಾನ 28ಕ್ಕೆ ಕುಸಿಯಲು ಕಾರಣವಾಗಿದೆ. ಎಲ್ಲಿ ತಪ್ಪಾಗಿದೆ ಎಂಬುದನ್ನು ಪರಿಶೀಲನೆ ಮಾಡುತ್ತೇವೆ’ ಎಂದು ಡಿಡಿಪಿಐ ಸೂರ್ಯ ಪ್ರಕಾಶ್‌ ಮೂರ್ತಿ ಹೇಳಿದರು.

ಶೇ 100 ಫಲಿತಾಂಶ: ತಾಲ್ಲೂಕಿನ ತುಂಬಕೆರೆಯ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಶೇ 100 ಫಲಿತಾಂಶ ಪಡೆದಿದೆ. ಪರೀಕ್ಷೆ ಬರೆದ ಎಲ್ಲಾ 39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೊನ್ನಾನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಲ್ಲಾ 30 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 100ರಷ್ಟು ಫಲಿತಾಂಶ ಪಡೆದಿವೆ.

ಭಾರತಿ ಪ್ರೌಢಶಾಲೆ ಸಾಧನೆ: ಭಾರತೀನಗರದ ಭಾರತಿ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆ (ಎಕ್ಸಲೆನ್ಸ್) ಶೇ.98ರಷ್ಟು ಫಲಿತಾಂಶ ಪಡೆದಿದೆ. ಎಂಟು 8 ವಿದ್ಯಾರ್ಥಿಗಳು ‘ಎ‌’ ಪ್ಲಸ್‌ ಶ್ರೇಣಿ, 33 ವಿದ್ಯಾರ್ಥಿಗಳು ‘ಎ’ ಶ್ರೇಣಿ, 22 ವಿದ್ಯಾರ್ಥಿಗಳು ‘ಬಿ’ ಪ್ಲಸ್‌ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಿ.ಜೆ. ವಿಮಲಾ (600), ಕೆ.ಐ ದರ್ಶನ್ (594), ಕೃಷ್ಣಾನಂದ (589), ಪಿ. ಲೀಷಾ (586), ಡಿ.ಸಿಂಚನಾಗೌಡ (586), ಎನ್.ಎಸ್. ಲಿಖಿತಾ (579), ಆರ್. ಶ್ರೇಯಾ (575), ಜಿ. ಆರ್ ಹರ್ಷಿತ್‌ ಗೌಡ (564), ಎಂ.ಆರ್ ಚೇತನ್ (555), ಬಿ.ಕೆ ನಿತ್ಯಾ(555) ಅಂಕ ಪಡೆದಿದ್ದಾರೆ.

ಬ್ಲಾಕ್‌ವಾರು ಫಲಿತಾಂಶ

ತಾಲ್ಲೂಕು ಶೇ ಫಲಿತಾಂಶ
ಮದ್ದೂರು 82.43
ಪಾಂಡವಪುರ 82.01
ಮಂಡ್ಯ ಉತ್ತರ 79.67
ಮಳವಳ್ಳಿ 72.61
ಮಂಡ್ಯ ದಕ್ಷಿಣ 71.88
ಕೆ.ಆರ್‌.ಪೇಟೆ 65.89
ನಾಗಮಂಗಲ 61.05
ಶ್ರೀರಂಗಪಟ್ಟಣ 53.37

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT