ಮನಾಮಾ: ಬುಧವಾರ ಬಹರೇನ್ ವಿರುದ್ಧ ಸ್ನೇಹಪರ ಪಂದ್ಯ ಆಡಲಿರುವ ಭಾರತ ತಂಡದ ಏಳು ಆಟಗಾರರು ವೀಸಾ ಸಿಗದೇ ಮುಂಬೈನಲ್ಲಿ ಉಳಿದಿದ್ದಾರೆ. ಇದರಿಂದಾಗಿ ಅವರು ಪಂದ್ಯದಲ್ಲಿ ಆಡುವ ಅವಕಾಶವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಭಾರತ ತಂಡದಲ್ಲಿ 25 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಸೋಮವಾರ ಕೋಚ್ ಇಗೋರ್ ಸ್ಟಿಮ್ಯಾಚ್ ಮತ್ತು 18 ಆಟಗಾರರು ಮನಾಮಾ ತಲುಪಿದರು. ವೀಸಾ ಸಮಸ್ಯೆಯಿಂದಾಗಿ ಗೋಲ್ಕೀಪರ್ ಅಮರಿಂದರ್ ಸಿಂಗ್, ಡಿಫೆಂಡರ್ ಚಿಂಗ್ಲೆನ್ಸೆನಾನಾ ಸಿಂಗ್, ಆಕಾಶ್ ಮಿಶ್ರಾ, ಮಿಡ್ಫೀಲ್ಡರ್ ಅನಿರುದ್ಧ ಥಾಪಾ, ಬ್ರೆಂಡನ್ ಫರ್ನಾಂಡಿಸ್, ಅನಿಕೇತ್ ಯಾದವ್ ಮತ್ತು ಬಿಪಿನ್ ಸಿಂಗ್ ತಮ್ಮ ಸಹ ಆಟಗಾರರೊಂದಿಗೆ ತೆರಳಲಿಲ್ಲ.
‘ಪ್ರಯಾಣದಲ್ಲಿ ತೊಂದರೆ ಅನುಭವಿಸಿದ್ದೇವೆ. ಏಳು ಆಟಗಾರರಿಗೆ ಇನ್ನೂವರೆಗೂ ವೀಸಾ ಸಿಕ್ಕಿಲ್ಲ. ಎರಡು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ ಈ ಸಮಸ್ಯೆಯಾಗಿದೆ’ ಎಂದು ಕೋಚ್ ಸ್ಟಿಮ್ಯಾಚ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
‘ಮಂಗಳವಾರ ಆಟಗಾರರ ವೀಸಾಗಳು ಸಿದ್ಧಗೊಂಡಿವೆ. ಅವರೆಲ್ಲರೂ ಬುಧವಾರ ಪ್ರಯಾಣ ಮಾಡಲಿದ್ದಾರೆ’ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಮೂಲಗಳು ತಿಳಿಸಿವೆ.
ಭಾರತ ತಂಡವು ಇಲ್ಲಿ ಎರಡು ಸೌಹಾರ್ದ ಪಂದ್ಯಗಳನ್ನು ಪಂದ್ಯಗಳನ್ನು ಆಡಲಿದೆ. ಬುಧವಾರ ಬಹರೇನ್ ವಿರುದ್ಧ ಮತ್ತು ಶನಿವಾರ ಬೆಲಾರೂಸ್ ಎದುರು ಹಣಾಹಣಿ ನಡೆಸುವುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.