ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ ಓಪನ್‌: ಸಿಂಧು, ಶ್ರೀಕಾಂತ್‌ ಮೇಲೆ ನಿರೀಕ್ಷೆ

ಭರವಸೆಯಲ್ಲಿ ಸೈನಾ ನೆಹ್ವಾಲ್‌, ಎಚ್‌.ಎಸ್‌.ಪ್ರಣಯ್‌, ಸಮೀರ್ ವರ್ಮಾ
Last Updated 10 ಸೆಪ್ಟೆಂಬರ್ 2018, 14:20 IST
ಅಕ್ಷರ ಗಾತ್ರ

ಟೋಕಿಯೊ : ಏಷ್ಯನ್‌ ಕ್ರೀಡಾಕೂಟ ಸೇರಿದಂತೆ ಮೂರು ಪ್ರಮುಖ ಟೂರ್ನಿಗಳಲ್ಲಿ ಬೆಳ್ಳಿ ಪದಕ ಗಳಿಸಿದ ಭಾರತದ ಪಿ.ವಿ.ಸಿಂಧು ಮತ್ತೊಂದು ಸವಾಲಿಗೆ ಸಜ್ಜಾಗಿದ್ದಾರೆ. ಮಂಗಳವಾರ ಆರಂಭವಾಗಲಿರುವ ಜಪಾನ್ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಹಿಳಾ ವಿಭಾಗದ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿ ಅವರು ಕಣಕ್ಕೆ ಇಳಿಯಲಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಸಿಂಧು ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲೂ ಅವರು ಚಿನ್ನ ಗೆಲ್ಲಲು ವಿಫಲರಾಗಿದ್ದರು.

ಥಾಯ್ಲೆಂಡ್‌, ಮಲೇಷ್ಯಾ ಇಂಡೊನೇಷ್ಯಾ ಟೂರ್ನಿ ಸೇರಿದಂತೆ ಪ್ರಮುಖ ಓಪನ್‌ ಟೂರ್ನಿಗಳಲ್ಲೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದ ಸಿಂಧು, ಜಪಾನ್ ಓಪನ್‌ನಲ್ಲಾದರೂ ಪ್ರಶಸ್ತಿ ಎತ್ತಿ ಹಿಡಿಯುವರೇ ಎಂಬ ಕುತೂಹಲ ಬ್ಯಾಡ್ಮಿಂಟನ್‌ ಪ್ರಿಯರಲ್ಲಿ ಮೂಡಿದೆ.

ಅವರಿಗೆ ಇಲ್ಲಿ ಮೂರನೇ ಶ್ರೇಯಾಂಕ ನೀಡಿದ್ದು ಮೊದಲ ಪಂದ್ಯದಲ್ಲಿ ಜಪಾನ್‌ನ ಸಯಾಕ ತಕಹಾಸಿ ಅವರನ್ನು ಎದುರಿಸುವರು. ಕ್ವಾರ್ಟರ್ ಫೈನಲ್‌ ಹಂತ ತಲುಪಲು ಸಾಧ್ಯವಾದರೆ ಸಿಂಧು ಮೂರು ಬಾರಿಯ ವಿಶ್ವ ಚಾಂಪಿಯನ್ ಕರೊಲಿನಾ ಮರಿನ್‌ ಅಥವಾ ಪ್ರತಿಭಾವಂತ ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು ಎದುರಿಸಬೇಕಾಗಬಹುದು.

ಸೈನಾಗೆ ಪ್ರತಿಷ್ಠೆಯ ಟೂರ್ನಿ

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಸೈನಾ ನೆಹ್ವಾಲ್‌ ಅವರು ನಂತರ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಲಿಲ್ಲ. ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದ್ದರಿಂದ ಜಪಾನ್ ಓಪನ್‌ ಅವರಿಗೆ ಪ್ರತಿಷ್ಠೆಯ ಕಣವಾಗಿದೆ.

ಕಿದಂಬಿ ಶ್ರೀಕಾಂತ್‌, ಪ್ರಣಯ್‌ ಮೇಲೆ ನಿರೀಕ್ಷೆ: ಪುರುಷರ ವಿಭಾಗದಲ್ಲಿ ಕಿದಂಬಿ ಶ್ರೀಕಾಂತ್ ಮತ್ತು ಎಚ್‌.ಎಸ್‌.ಪ್ರಣಯ್‌ ಅವರು ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ನಿರಾಸೆ ಕಂಡಿದ್ದ ಅವರಿಗೆ ಮರುಜೀವ ಪಡೆಯಲು ಈ ಟೂರ್ನಿ ನೆರವಾಗಲಿದೆ. ಕಿದಂಬಿ ಶ್ರೀಕಾಂತ್ ಅವರಿಗೆ ಈ ಬಾರಿ ಸಹಜ ಆಟ ಆಡಲು ಆಗಲಿಲ್ಲ. ಮಲೇಷ್ಯಾ ಓಪನ್‌ನಲ್ಲಿ ಸೆಮಿಫೈನಲ್‌ ಹಂತ ತಲುಪಿದ್ದು ಅವರ ಗರಿಷ್ಠ ಸಾಧನೆಯಾಗಿತ್ತು. ಜಪಾನ್ ಓಪನ್‌ನ ಮೊದಲ ಪಂದ್ಯದಲ್ಲಿ ಅವರಿಗೆ ಚೀನಾದ ವ್ಯಾಂಗ್ ಹುಕ್ಸಿಯಾಂಗ್ ಎದುರಾಳಿ.

ಎಚ್.ಎಸ್‌.ಪ್ರಣಯ್ ಕೂಡ ಭರವಸೆಯಲ್ಲಿದ್ದು ಅವರು ಮೊದಲ ಪಂದ್ಯದಲ್ಲಿ ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರನ್ನು ಎದುರಿಸುವರು. ಭಾರತದ ಮತ್ತೊಬ್ಬ ಭರವಸೆಯ ಆಟಗಾರ ಸಮೀರ್‌ ವರ್ಮಾ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಲೀ ಡಾಂಗ್‌ ಕ್ವೆನ್ ಎದುರು ಸೆಣಸುವರು. ಬಿ.ಸಾಯಿಪ್ರಣೀತ್ ಟೂರ್ನಿಯಿಂದ ಹಿಂದೆ ಸರಿದಿದ್ದು ಇದಕ್ಕೆ ಕಾರಣವೇನೆಂದು ಹೇಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT