ಕಲಬುರ್ಗಿ: ಮಂಗಳೂರು ವಿಶ್ವವಿದ್ಯಾಲಯ ತಂಡವು ಗುರುವಾರ ಇಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರಾಸ್ ಕಂಟ್ರಿ ಚಾಂಪಿಯನ್ಷಿಪ್ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದಿತು. ಸತತ ಮೂರನೇ ವರ್ಷ ಈ ಸಾಧನೆಯನ್ನು ಮಾಡಿತು.
ಗುಲಬರ್ಗಾ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಮಂಗಳೂರು ವಿವಿಯ ಪುರುಷರ ತಂಡ 15 ಮತ್ತು ಮಹಿಳೆಯರ ತಂಡ 50 ಪಾಯಿಂಟ್ಸ್ ಕಲೆ ಹಾಕಿದವು.
ಪುರುಷರ ತಂಡ ವಿಭಾಗದಲ್ಲಿ ಮಂಗಳೂರು ವಿವಿ ಪ್ರಥಮ, ರೋಹ್ಟಕ್ನ ಮಹರ್ಷಿ ದಯಾನಂದ ವಿವಿ ದ್ವಿತೀಯ ಮತ್ತು ಚಂಡೀಗಡದ ಪಂಜಾಬ್ ವಿವಿ ತೃತೀಯ ಸ್ಥಾನ ಪಡೆದವು.
ಮಹಿಳಾ ವಿಭಾಗದಲ್ಲಿ ಪಟಿಯಾಲದ ಪಂಜಾಬಿ ವಿವಿ ಪ್ರಥಮ, ಮಂಗಳೂರು ವಿವಿ ದ್ವಿತೀಯ ಮತ್ತು ಗೋರಖ್ಪುರದ ದೀನದಯಾಳ್ ಉಪಾಧ್ಯಾಯ ವಿವಿ ತೃತೀಯ ಸ್ಥಾನ ಗಳಿಸಿದವು.
ರೋಹ್ಟಕ್ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ ಕಾರ್ತಿಕ್ ಕುಮಾರ್ ಮತ್ತು ಆರ್ಟಿಎಂ ನಾಗಪುರ ವಿಶ್ವವಿದ್ಯಾಲಯದ ಪ್ರಜಕ್ತಾ ಗೋಡಬೋಲೆ ವೈಯಕ್ತಿಕ ವಿಭಾಗದಲ್ಲಿ ಚಾಂಪಿಯನ್ ಆದರು. ಕಾರ್ತಿಕ್ 30.40 ಮತ್ತು ಪ್ರಜಕ್ತಾ 35.55 ನಿಮಿಷದಲ್ಲಿ ಗುರಿ ಮುಟ್ಟಿದರು.
ಮಂಗಳೂರು ವಿವಿಯ ನರೇಂದ್ರ ಪ್ರತಾಪ್ ಸಿಂಗ್ (31.7), ದಿನೇಶ್ (31.11) ಮತ್ತು ಅಬ್ದುಲ್ ಬ್ಯಾರಿ (31.15) ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನ ಪಡೆದರು. ಜ್ಯೋತಿ ಚವಾಣ್ (36.38) ಕಂಚಿನ ಪದಕ ಪಡೆದರು.