ಬೆಲ್ಗ್ರೇಡ್: ಭಾರತದ ಫ್ರೀಸ್ಟೈಲ್ ಕುಸ್ತಿಪಟು ಪೃಥ್ವಿರಾಜ್ ಪಾಟೀಲ್ ಅವರು (92 ಕೆ.ಜಿ. ವಿಭಾಗ) ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆದರೆ ಇತರ ಮೂವರಿಗೆ ಪ್ರಾಥಮಿಕ ಸುತ್ತಿನಲ್ಲಿ ನಿರಾಸೆ ಎದುರಾಯಿತು.
ಭಾನುವಾರ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ ಪೃಥ್ವಿರಾಜ್ 6–4 ರಿಂದ ಮಾಲ್ಡೀವ್ನ ಅಯೊನ್ ಡೆಮಿಯೆನ್ ಅವರನ್ನು ಮಣಿಸಿದರೆ, ಪ್ರಿ ಕ್ವಾರ್ಟರ್ ಫೈನಲ್ನಲ್ಲಿ 6–1 ರಿಂದ ಸ್ಲೊವೇಕಿಯದ ಎರ್ಮಾಕ್ ಕರ್ದನೊವ್ ವಿರುದ್ಧ ಗೆದ್ದರು.
ವಿಶ್ವ ರ್ಯಾಂಕಿಂಗ್ನಲ್ಲಿ 12ನೇ ಸ್ಥಾನದಲ್ಲಿರುವ ಪೃಥ್ವಿರಾಜ್ ಅವರು ಎಂಟರಘಟ್ಟದ ಹಣಾಹಣಿಯಲ್ಲಿ ಜಾರ್ಜಿಯದ ಮಿರಿಯಾನಿ ಮಾಯ್ಸುರಜ್ ಅವರ ಸವಾಲನ್ನು ಎದುರಿಸುವರು.
70 ಕೆ.ಜಿ ವಿಭಾಗದಲ್ಲಿ ಅಭಿಮನ್ಯು ಅವರು ‘ರಿಪೇಜ್’ ಹಾದಿಯಲ್ಲಿ ಕಂಚಿನ ಪದಕದ ‘ಪ್ಲೇ ಆಫ್’ ಸುತ್ತು ತಲುಪಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.
79 ಕೆ.ಜಿ ವಿಭಾಗದಲ್ಲಿ ಸಚಿನ್ ಮೋರ್, 57 ಕೆ.ಜಿ. ವಿಭಾಗದಲ್ಲಿ ಅಮನ್ ಸೆಹ್ರಾವತ್ ಮತ್ತು 74 ಕೆ.ಜಿ. ವಿಭಾಗದಲ್ಲಿ ನವೀನ್ ಅವರು ಎಡವಿದರು.