ಗದಗ: ಇತ್ತೀಚೆಗೆ ಗದುಗಿನಲ್ಲೊಂದು ಮನೆ ಕಳವು ಪ್ರಕರಣ ನಡೆಯಿತು. ನಗರದ ಇರಾನಿ ಕಾಲೋನಿಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಮನೆಯೊಂದಕ್ಕೆ ನುಗ್ಗಿದ ಕಳ್ಳ, ಚಿನ್ನ, ನಗದು ಕದ್ದು ಪರಾರಿಯಾಗುವಾಗ ಗಸ್ತು ತಿರುಗುತ್ತಿದ್ದ ಪೊಲೀಸರ ಕಣ್ಣಿಗೆ ಬಿದ್ದ. ಪೊಲೀಸರು ಇನ್ನೇನು ಕಳ್ಳನನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಆತ ಅವರ ಮೇಲೆ ಹಲ್ಲೆ ಮಾಡಿ, ಸಮೀಪದಲ್ಲೇ ಇದ್ದ ಜಾಲಿ ಮುಳ್ಳಿನ ಪೊದೆಯೊಳಗೆ ನುಗ್ಗಿ, ಅವಿತುಕೊಂಡ. ಅರ್ಧ ಎಕರೆ ಪ್ರದೇಶದಲ್ಲಿ ಹುಲುಸಾಗಿ ಬೆಳೆದಿದ್ದ ಮುಳ್ಳಿನ ಪೊದೆ. ಕಗ್ಗತ್ತಲು ಬೇರೆ. ಕಳ್ಳನನ್ನು ಹುಡುಕುವ ಸವಾಲು ಪೊಲೀಸರಿಗೆ ಎದುರಾಯಿತು.