ಲಖನೌ: ಉತ್ತಮ ಸಾಮರ್ಥ್ಯ ತೋರಿದ ಭಾರತದ ಎಚ್.ಎಸ್.ಪ್ರಣಯ್ ಅವರು ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡನೇ ಸುತ್ತು ತಲುಪಿದ್ದಾರೆ.
ಮಂಗಳವಾರ ಆರಂಭವಾದ ಟೂರ್ನಿಯ ಪುರುಷರ ಸಿಂಗಲ್ಸ್ ಮೊದಲ ಪಂದ್ಯದಲ್ಲಿ ಅವರು ನೇರ ಸೆಟ್ಗಳಿಂದ ಉಕ್ರೇನ್ನ ಡ್ಯಾನಿಲೊ ಬೋಸ್ನಿಕ್ ಅವರನ್ನು ಪರಾಭವಗೊಳಿಸಿದರು. ಕೇವಲ 36 ನಿಮಿಷಗಳ ಈ ಹಣಾಹಣಿಯಲ್ಲಿ ಭಾರತದ ಆಟಗಾರನಿಗೆ21-14, 21-18ರಿಂದ ಗೆಲುವು ಒಲಿಯಿತು.
ಇತ್ತೀಚೆಗೆ ಕೊನೆಗೊಂಡ ಇಂಡಿಯಾ ಓಪನ್ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ಲಕ್ಷ್ಯ ಸೇನ್ ಅವರಿಗೆ ಮಣಿದಿದ್ದ ಪ್ರಣಯ್, ಮುಂದಿನ ಸುತ್ತಿನ ಪಂದ್ಯದಲ್ಲಿ ಭಾರತದ ಪ್ರಿಯಾಂಶು ರಾಜಾವತ್ ಅವರನ್ನು ಎದುರಿಸಲಿದ್ದಾರೆ. ಪ್ರಿಯಾಂಶು ಮೊದಲ ಸುತ್ತಿನಲ್ಲಿ ವಾಕ್ಓವರ್ ಪಡೆದಿದ್ದಾರೆ.
ನಾಲ್ಕನೇ ಶ್ರೇಯಾಂಕದ ಸಮೀರ್ ವರ್ಮಾ ಅವರು ಐರ್ಲೆಂಡ್ನ ನಹತ್ ಗುಯೆನ್ ಎದುರಿನ ಮೊದಲ ಸುತ್ತಿನ ಪಂದ್ಯದ ವೇಳೆ ಗಾಯಗೊಂಡು ನಿವೃತ್ತರಾದರು. ಮೊದಲ ಗೇಮ್ನಲ್ಲಿ 2–7ರಿಂದ ಹಿನ್ನಡೆಯಲ್ಲಿದ್ದಾಗ ಸಮೀರ್ ಕಾಲುನೋವಿನಿಂದಾಗಿ ಹಿಂದೆ ಸರಿದರು. ಶುಭಂಕರ್ ಡೇ ಕೂಡ ಕಾರ್ತಿಕೇಯ ಗುಲ್ಶನ್ ಕುಮಾರ್ ಎದುರಿನ ಪಂದ್ಯದಲ್ಲಿ 2–9ರಲ್ಲಿ ಹಿಂದುಳಿದಿದ್ದಾಗ ಗಾಯದ ಕಾರಣ ಆಟ ಮುಂದುವರಿಸಲಿಲ್ಲ.
ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಸ್ಮಿತಾ ಚಲಿಹಾ ಅವರು ಮಾಳವಿಕಾ ಬಾನ್ಸೋದ್ ಅವರಿಗೆ ವಾಕ್ಓವರ್ ನೀಡಿದರೆ, ಆಕರ್ಷಿ ಕಶ್ಯಪ್ 21-13, 21-14ರಿಂದ ಮುಗ್ದಾ ಅಗ್ರೆ ಎದುರು ಗೆದ್ದರು. ಅನುಪಮಾ ಉಪಾಧ್ಯಾಯ ಅವರು ಋತುಪರ್ಣಾ ದಾಸ್ ಸವಾಲು ಮೀರಿದರು.
ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ಅವರು ಬುಧವಾರ ಮೊದಲ ಸುತ್ತಿನಲ್ಲಿ ಭಾರತದ ತಾನಿಯಾ ಹೇಮಂತ್ ವಿರುದ್ಧ ಆಡುವರು.