ಬೆಂಗಳೂರು: ಕರ್ನಾಟಕದ ಕ್ರಿಶ್ ಅಜಯ್ ತ್ಯಾಗಿ ಐಟಿಎಫ್ ವಿಶ್ವ ಜೂನಿಯರ್ ಟೆನಿಸ್ ಚಾಂಪಿಯನ್ಷಿಪ್ನ (14 ವರ್ಷದೊಳಗಿನವರು) ಏಷ್ಯಾ ಒಷಾನಿಯಾ ಅಂತಿಮ ಅರ್ಹತಾ ಸುತ್ತಿನ ಟೂರ್ನಿಗೆ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಜೂನ್ 7ರಿಂದ 12ರವರೆಗೆ ಕಜಕಸ್ತಾನದ ನೂರ್ ಸುಲ್ತಾನ್ನಲ್ಲಿ ಈ ಟೂರ್ನಿ ನಡೆಯಲಿದೆ.
ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ಜೂನಿಯರ್ ಆಯ್ಕೆ ಸಮಿತಿಯು ಎರಡು ದಿನಗಳ ಹಿಂದೆ ಸಭೆ ಸೇರಿ ನಾಲ್ಕು ಮಂದಿಯ ತಂಡವನ್ನು ಆಯ್ಕೆ ಮಾಡಿದೆ. ಅವರಲ್ಲಿ ಕ್ರಿಶ್ ಕೂಡ ಒಬ್ಬರು. ರೇತಿನ್ ಪ್ರಣವ್ ಆರ್.ಎಸ್, ಮನಸ್ ಮನೋಜ್ ಧಾಮನೆ ಹಾಗೂ ತೇಜಸ್ ಅಹುಜಾ (ಕಾಯ್ದಿರಿಸಿದ ಆಟಗಾರ) ತಂಡದಲ್ಲಿ ಸ್ಥಾನ ಗಳಿಸಿದ ಇನ್ನುಳಿದ ಮೂವರಾಗಿದ್ದಾರೆ. ಸಾಜಿದ್ ಲೋಧಿ ತಂಡದ ನಾಯಕ.
ಕ್ರಿಶ್ ಅವರು ಸದ್ಯ 14 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಮಾರ್ಚ್ನಲ್ಲಿ ಮುಂಬೈನಲ್ಲಿ ನಡೆದ ಟೂರ್ನಿಯಲ್ಲಿ ಅವರು ಈ ಕಿರೀಟ ಧರಿಸಿದ್ದರು.
‘ಭಾರತ ತಂಡಕ್ಕೆ ಆಡುವುದು ಹೆಮ್ಮೆಯ ಸಂಗತಿ. ತಂಡವನ್ನು ಪ್ರತಿನಿಧಿಸಲು ಉತ್ಸುಕನಾಗಿದ್ದೇನೆ. ಕಠಿಣ ಪರಿಶ್ರಮ, ದೃಢನಂಬಿಕೆಯಿಂದ ಇದು ಸಾಧ್ಯವಾಗಿದೆ‘ ಎಂದು 13 ವರ್ಷದ, ಬೆಂಗಳೂರಿನ ಸಿಲ್ವರ್ ಓಕ್ ಇಂಟರ್ನ್ಯಾಶನಲ್ ಶಾಲೆಯ ವಿದ್ಯಾರ್ಥಿ ಕ್ರಿಶ್ ಹೇಳಿದ್ದಾರೆ.