ದಾವಣಗೆರೆ: ಶ್ರೇಯಾಂಕರಹಿತ ಸ್ಥಳೀಯ ಆಟಗಾರ ಅಮರ್ ಟಿ. ಧರಿಯಣ್ಣವರ್ ಇಲ್ಲಿ ಸೋಮವಾರ ಆರಂಭಗೊಂಡ ಎಂ.ಪಿ. ರವೀಂದ್ರ ಸ್ಮಾರಕ ರಾಷ್ಟ್ರಮಟ್ಟದ 50–ಕೆ ಪುರುಷರ ಟೆನಿಸ್ ಟೂರ್ನಿಯಲ್ಲಿ ಮಿಂಚಿದರು.
ಎರಡನೇ ಶ್ರೇಯಾಂಕಿತ ಆಟಗಾರ ಮಧ್ಯಪ್ರದೇಶದ ಯಶ್ ಯಾದವ್ ಅವರನ್ನು 6–3, 7–6(6)ರಿಂದ ಮಣಿಸಸಿದರು.
ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್, ಹೂವಿನಹಡಗಲಿಯ ರಂಗಭಾರತಿ ಮತ್ತು ಕರ್ನಾಟಕ ಟೆನಿಸ್ ಪ್ಲೇಯರ್ಸ್ ಪೇರೆಂಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಜಿಲ್ಲಾ ಟೆನಿಸ್ ಕ್ರೀಡಾಂಗಣದಲ್ಲಿ
ನಡೆಯುತ್ತಿರುವ ಟೂರ್ನಿಯ ಮೊದಲ ದಿನ ಯಶ್ ಸೇರಿದಂತೆ ಅಗ್ರ ಶ್ರೇಯಾಂಕಿತ ಆಟಗಾರರು ಆಘಾತ ಅನುಭವಿಸಿದರು.
ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಅಮರ್ 6–3ರಲ್ಲಿ ಮೊದಲ ಸೆಟ್ ಗೆಲ್ಲುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಎರಡನೇ ಸೆಟ್ನಲ್ಲಿ ಯಶ್ ಯಾದವ್ ಪ್ರಬಲ ಪೈಪೋಟಿ ಒಡ್ಡಿದರು. 12 ಗೇಮ್ಗಳ ಮುಕ್ತಾಯಕ್ಕೆ ಸ್ಕೋರು 6–6 ಆಯಿತು. ಟೈಬ್ರೇಕರ್ನಲ್ಲಿ 8–6ರಿಂದ ಗೆದ್ದು ಅಮರ್ ಸಂಭ್ರಮಿಸಿದರು.
ತಮಿಳುನಾಡಿನ ವಿ. ರೋಹಿತ್ 6–2, 6–3ರಲ್ಲಿ ತಮ್ಮದೇ ರಾಜ್ಯದ, ಒಂದನೇ ಶ್ರೇಯಾಂಕದ ಆಟಗಾರ ಸಿದ್ಧಾರ್ಥ ಪೊನ್ನಾಳ್ ಅವರನ್ನು ಮಣಿಸಿದರು. ಬೆಂಗಳೂರಿನ ಅರ್ಜುನ್ ಶ್ರೀರಾಮ್ 6–2, 7–5ರಲ್ಲಿ ಐದನೇ ಶ್ರೇಯಾಂಕದ, ದಾವಣಗೆರೆಯ ಅಲೋಕ್ ಆರಾಧ್ಯ ಅವರನ್ನು ಸೋಲಿಸಿದರು. ಪಶ್ಚಿಮ ಬಂಗಾಳದ ಅಮಿತ್ ರಾವುತ್ 6–3, 3–6, 7–6(6)ರಲ್ಲಿ ಎಂಟನೇ ಶ್ರೇಯಾಂಕದ ಆಂಧ್ರಪ್ರದೇಶದ ಉಮೇಶ್ ಶೇಖ್ ವಿರುದ್ಧ ಗೆದ್ದರು. ಶಾಹುಲ್ ಅನ್ವರ್ 2–6, 7–5, 6–3ರಲ್ಲಿ ದಾವಣಗೆರೆಯ ಎಂ.ಎಸ್. ಕಾರ್ತಿಕ್ ಅವರನ್ನು; ತಮಿಳುನಾಡಿನ, ನಾಲ್ಕನೇ ಶ್ರೇಯಾಂಕದ ತಹಾ ಕಪಾಡಿಯಾ 7–5, 2–6, 6–2ರಲ್ಲಿ ಇಸಾನ್ ಹುಸೇನ್ ಮಹಮ್ಮದ್ ಅವರನ್ನು; ಆಸ್ಸಾಂನ ಆರನೇ ಶ್ರೇಯಾಂಕದ ಶೇಖ್ ಇಫ್ತಾರ್ ಮಹಮ್ಮದ್ 6–2, 6–1ರಲ್ಲಿ ರಾಜ್ಯದ ವಿನಾಯಕ ಕುಂಬಾರ್ ಅವರನ್ನು ಮಣಿಸಿದರು.
ತಮಿಳುನಾಡಿನ ಎ.ಕೆ. ರೋಹಿತ್ 6–3, 6–1ರಲ್ಲಿ ರಾಜ್ಯದ ತಾತಾಘಾಟ್ ಚರಂತಿಮಠ ಎದುರು; ರಾಜ್ಯದ ನಿಕ್ಷೇಪ್ ರವಿಕುಮಾರ್ 6–1, 6–1ರಲ್ಲಿ ರಾಜ್ಯದ ಟಿ. ವಿನಯ್ ಕುಮಾರ್ ವಿರುದ್ಧ ಜಯಿಸಿದರು. ರಾಜ್ಯದ ಆರ್ಯನ್ ಪತಂಗೆ 6–4, 6–3ರಲ್ಲಿ ದಾವಣಗೆರೆಯ ರಿಭವ್ ರವಿಕಿರಣ್ ಅವರನ್ನು; ತಮಿಳುನಾಡಿನ ಸೂರ್ಯ ರೆಡ್ಡಿ 6–3, 6–1ರಲ್ಲಿ ರಾಜ್ಯದ ಕೆ. ವಿನಯ್ ಅವರನ್ನು; ರಾಜ್ಯದ ನೇಸರ ಜೆವೂರು 6–2, 6–2ರಲ್ಲಿ ರೂಪೇಶ್ ಕುಮಾರ್ ಅವರನ್ನು ಸೋಲಿಸಿದರು.
ಮಹಾರಾಷ್ಟ್ರದ ಖಾದ್ರಿ ಫಯಾಜ್ ಹುಸೇನ್ 6–2, 6–1ರಲ್ಲಿ ತಮ್ಮದೇ ರಾಜ್ಯದ ಹಿತೇಶ್ ಶರ್ಮ ಎದುರು; ಆಂಧ್ರಪ್ರದೇಶದ ಬಾಬಜಿ ಶಿವ ಅತ್ತೂರು 6–3, 6–2ರಲ್ಲಿ ರಾಜ್ಯದ ಟಿ. ಪ್ರಣವ್ ವಿರುದ್ಧ; ಆಂಧ್ರಪ್ರದೇಶದ ಸಾಜಿದ್ ರೆಹಮಾನ್ 6–1, 7–5ರಲ್ಲಿ ರಾಜ್ಯದ ಬಸವರಾಜ್ ಎದುರು ಗೆದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.