ಹೊಸಪೇಟೆ: ಬಳ್ಳಾರಿ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಹಮ್ಮಿಕೊಂಡಿದ್ದ ಮೂರು ದಿನಗಳ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ಗೆ ಶನಿವಾರ ಸಂಜೆ ಇಲ್ಲಿನ ತುಂಗಭದ್ರಾ ರಿಕ್ರಿಯೇಷನ್ ಕ್ಲಬ್ನಲ್ಲಿ ವಿಧ್ಯುಕ್ತ ತೆರೆ ಬಿತ್ತು.
ಕೊನೆಯ ದಿನ ಬಾಲಕ/ಬಾಲಕಿಯರ ಜೂನಿಯರ್, ಬಾಲಕ/ಬಾಲಕಿಯರ ಕೆಡೆಟ್ ವಿಭಾಗದ ಪಂದ್ಯಗಳು ನಡೆದವು. ಬೆಂಗಳೂರಿನ ದೇಶ್ನಾ ಎಂ. ವಂಶಿಕಾ, ಕೆ.ಜೆ. ಆಕಾಶ, ಸಿದ್ಧಾಂತ್ ವಸನ್ ಹಾಗೂ ನೀತಿ ಅಗರವಾಲ್ ಪ್ರಶಸ್ತಿ ಜಯಿಸಿದರು.
ಬಾಲಕಿಯರ ಜೂನಿಯರ್ ವಿಭಾಗದಲ್ಲಿ ದೇಶ್ನಾ ಅವರು ಅದಿತಿ ಪಿ. ಜೋಶಿ ಅವರನ್ನು 11–7, 11–2, 11–9, 11–9 ನೇರ ಸೆಟ್ಗಳಿಂದ ಸೋಲಿಸಿದರು. ಮೊದಲ ಸುತ್ತಿನಿಂದಲೂ ದೇಶ್ನಾ ಪರಿಣಾಮಕಾರಿ ಆಟವಾಡಿ ಎಲ್ಲ ಸುತ್ತುಗಳಲ್ಲಿ ಪಾರಮ್ಯ ಮೆರೆದು ಪ್ರಶಸ್ತಿ ಎತ್ತಿ ಹಿಡಿದರು.
ಬಾಲಕರ ಜೂನಿಯರ್ ವಿಭಾಗದಲ್ಲಿ ಕೆ.ಜೆ. ಆಕಾಶ 11–7, 5–11, 7–11, 11–7, 9–11, 11–8, 13–11ರಿಂದ ಸುಜನ್ ಆರ್. ಭಾರದ್ವಾಜ್ ಅವರನ್ನು ಮಣಿಸಿದರು.
ಬಾಲಕರ ಕೆಡೆಟ್ ವಿಭಾಗದಲ್ಲಿ ಸಿದ್ಧಾಂತ್ ವಸನ್ ಅವರು ಟೆಶ್ಬು ದಿನೇಶ್ ಅವರನ್ನು 11–6, 11–9, 7–11, 11–6ರಿಂದ ಪರಾಭವಗೊಳಿಸಿದರೆ, ಬಾಲಕಿಯರ ಕೆಡೆಟ್ ವಿಭಾಗದಲ್ಲಿ ನೀತಿ ಅಗರವಾಲ್ 13–11, 11–8, 11–5 ನೇರ ಸೆಟ್ಗಳಿಂದ ಸಾನ್ವಿ ವಿಶಾಲ್ ಮಂದೇಕರ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು.