ಕೋಲ್ಕತ್ತ: ‘ಭಾರತ ತಂಡದಿಂದ ಸ್ಥಾನ ಕಳೆದುಕೊಂಡಿರುವ ರವಿಚಂದ್ರನ್ ಅಶ್ವಿನ್ ಅವರಿಗೆ ಮಿಂಚಲು ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಅವಕಾಶವಿದೆ’ ಎಂದು ಹಿರಿಯ ಬ್ಯಾಟ್ಸ್ಮನ್ ಎಸ್.ಬದರಿನಾಥ್ ಅಭಿಪ್ರಾಯಪಟ್ಟಿದ್ದಾರೆ.
‘ಅಶ್ವಿನ್ ಜೊತೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಆಪ್ತ ಗೆಳೆಯನಾಗಿರುವ ಆತನನ್ನು ನಾನು ಚೆನ್ನಾಗಿ ಬಲ್ಲೆ. ಈ ಬಾರಿ ಐಪಿಎಲ್ನಲ್ಲಿ ಮಿಂಚುವ ಮೂಲಕ ಆತ ಮತ್ತೆ ಭಾರತ ತಂಡದಲ್ಲಿ ಸ್ಥಾನ ಗಳಿಸುವ ಭರವಸೆ ಇದೆ’ ಎಂದು ಬದರಿನಾಥ್ ಅಭಿಪ್ರಾಯಪಟ್ಟರು.
ಕಳೆದ ಬಾರಿ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದಾಗ ಕೊನೆಯದಾಗಿ ರಾಷ್ಟ್ರೀಯ ತಂಡದಲ್ಲಿ ಆಡಿದ್ದ ಅಶ್ವಿನ್ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೂರು ಪಂದ್ಯಗಳಲ್ಲಿ ಒಂದು ವಿಕೆಟ್ ಗಳಿಸಿದ್ದರು.
ಐಪಿಎಲ್ನಲ್ಲಿ ಈ ವರೆಗೆ ಒಟ್ಟು 111 ಪಂದ್ಯಗಳನ್ನು ಆಡಿರುವ ಅವರು 100 ವಿಕೆಟ್ ಕಬಳಿಸಿದ್ದಾರೆ. ₹ 7.6 ಕೋಟಿ ಮೊತ್ತಕ್ಕೆ ಅವರನ್ನು ಖರೀದಿಸಿರುವ ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸ್, ತಂಡದ ನಾಯಕತ್ವವನ್ನೂ ವಹಿಸಿದೆ.