ಬಿಲ್ಬಾವೊ, ಸ್ಪೇನ್ (ಪಿಟಿಐ): ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ನಿರಾಸೆಯ ಹಾದಿಯಲ್ಲಿ ಸಾಗಿದ್ದಾರೆ. ನಾಲ್ಕನೇ ಹಾಗೂ ಅಂತಿಮ ಮಾಸ್ಟರ್ಸ್ 22 ವಿಭಾಗದ ಸೂಪರ್ ಚೆಸ್ ಟೂರ್ನಿಯ ಒಂಬತ್ತನೇ ಸುತ್ತಿನಲ್ಲಿ ಆಘಾತ ಅನುಭವಿಸಿದ ಅವರು ಕೊನೆಯ ಸ್ಥಾನಕ್ಕೆ ಕುಸಿದಿದ್ದಾರೆ.
ಕೊನೆಯೊಂದು ಸುತ್ತಿನ ಪಂದ್ಯ ಮಾತ್ರ ಬಾಕಿ ಇದೆ. ಆದ್ದರಿಂದ ಆನಂದ್ ಚೇತರಿಸಿಕೊಳ್ಳುವುದಕ್ಕೆ ಅವಕಾಶವೇ ಇಲ್ಲ. ಅಂತಿಮ ಸುತ್ತಿನ ಪಂದ್ಯವನ್ನು ಜಯಿಸಿದರೂ ಅವರ ಸ್ಥಾನದಲ್ಲಿ ಹೆಚ್ಚಿನ ವ್ಯತ್ಯಾಸವೇನು ಆಗದು. ಒಂದು ಸ್ಥಾನವಷ್ಟೇ ಬಡ್ತಿ ಸಿಗಬಹುದು. ಮಂಗಳವಾರದ ಪಂದ್ಯದಲ್ಲಿ ಅವರು ಅರ್ಮೆನಿಯಾದ ಲೆವೊನ್ ಏರೊನಿಯನ್ ವಿರುದ್ಧ ಆಘಾತ ಅನುಭವಿಸಿದರು.
ವಿಶ್ವ ಮೊದಲ ಕ್ರಮಾಂಕದ ಆಟಗಾರ ನಾರ್ವೆಯ ಮ್ಯಾಗ್ನೂಸ್ ಕಾಲ್ಸ್ಸನ್ ಗೆಲುವಿನ ಹಾದಿಯಲ್ಲಿ ನಡೆದಿದ್ದಾರೆ. ಒಟ್ಟು ಹದಿನಾಲ್ಕು ಪಾಯಿಂಟುಗಳನ್ನು ಕಲೆಹಾಕಿರುವ ಉಕ್ರೇನ್ನ ವೆಸಿಲಿ ಇವಾನ್ಚುಕ್ ಅವರು ಜಂಟಿ ಅಗ್ರಸ್ಥಾನದಲ್ಲಿದ್ದಾರೆ.