ಬೆಂಗಳೂರು: ವೆಸ್ಟ್ಇಂಡೀಸ್ ಎ ತಂಡದ ವಿರುದ್ಧ ಭಾನುವಾರ ನಡೆದ ಏಕದಿನ ಪಂದ್ಯದಲ್ಲಿ ಯುವರಾಜ್ ಸಿಂಗ್ 123 ರನ್ ಗಳಿಸುವ ಮೂಲಕ ಭಾರತದ ಗೆಲುವಿನ ರೂವಾರಿಯಾದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಮತ್ತು ವೆಸ್ಟ್ಇಂಡೀಸ್ ಎ ತಂಡದ ನಡುವಿನ ಪಂದ್ಯದಲ್ಲಿ 77 ರನ್ ಅಂತರದಿಂದ ಭಾರತ ಎ ತಂಡ ಗೆಲುವು ಪಡೆಯಿತು.
ಯುವರಾಜ್ ಸಿಂಗ್ 89 ಎಸೆತಗಳಲ್ಲಿ 8ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 123 ರನ್ಗಳ ಅದ್ಭುತ ಆಟ ಪ್ರದರ್ಶಿಸಿದರು.
ಟಾಸ್ ಗೆದ್ದ ವೆಸ್ಟ್ಇಂಡೀಸ್ ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡಿತು.
ಒಂದು ಗಂಟೆ 45 ನಿಮಿಷ ತಡವಾಗಿ ಪಂದ್ಯ ಆರಂಭಗೊಂಡಿದ್ದರಿಂದ 42 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು.
ಅಂತಿಮವಾಗಿ ಭಾರತ 4 ವಿಕೆಟ್ ನಷ್ಟಕ್ಕೆ 312 ರನ್ಗಳ ಬೃಹತ್ ಸವಾಲು ನೀಡಿತು.
ಮನ್ದೀಪ್ ಸಿಂಗ್(67) ಮತ್ತು ಯುಸೂಫ್ ಪಠಾಣ್ (70) ಸಹಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಮನದೀಪ್ ಮತ್ತು ಪಠಾಣ್ಗೆ ಉತ್ತಮ ಬೆಂಬಲ ನೀಡಿದ ಯುವರಾಜ್ 40 ನೇ ಓವರ್ನಲ್ಲಿ ಪೆವಿಲಿಯನ್ ದಾರಿ ಹಿಡಿದ ಮೇಲೆ ತಂಡದ ರನ್ ವೇಗ ಹೆಚ್ಚಿಸುವ ಹೊಣೆಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ ಪಠಾಣ್ ತಂಡದ ಮೊತ್ತ 300ರ ಗಡಿ ದಾಟುವಂತೆ ಬೌಂಡರಿ, ಸಿಕ್ಸರ್ ಸಿಡಿಸಿದರು.
32 ಎಸೆತಗಳಲ್ಲಿ 70 ರನ್ ಗಳಿಸಿದ ಯೂಸೆಫ್ ಪಠಾಣ್ ಖಾತೆಯಲ್ಲಿ 6 ಆಕರ್ಷಕ ಸಿಕ್ಸರ್ ಮತ್ತು 4 ಅದ್ಭುತ ಬೌಂಡರಿಗಳು ಸೇರಿದ್ದವು.
ವೆಸ್ಟ್ಇಂಡೀಸ್ ಪರ ಅಷ್ಲ್ಯೆ ನರ್ಸ್, (57) ನರಸಿಂಗ್ ಡಿಯೊನಾರಾಯಣ್ (57) ಅವರ ಅರ್ಧ ಶತಕದ ಹೋರಾಟ ಫಲನೀಡಲಿಲ್ಲ. ಅಂತಿಮವಾಗಿ 39.1 ಓವರ್ಗಳಲ್ಲಿ 235 ರನ್ಗಳಿಗೆ ಸರ್ವಪತನವಾಯಿತು.
ಭಾರತದ ಪರ ಸುಮಿತ್ ನಾರ್ವಲ್, ವಿನಯ್ ಕುಮಾರ್, ರಾಹುಲ್ ಶರ್ಮಾ ಮತ್ತು ಯೂಸುಫ್ ಪಠಾಣ್ ತಲಾ 2ವಿಕೆಟ್ ಪಡೆದರು.