ಬೆಂಗಳೂರು: ಭಾರತ ಹಾಕಿ ತಂಡದಲ್ಲಿರುವ ರಾಜ್ಯದ ಆಟಗಾರರಾದ ವಿ.ಆರ್.ರಘುನಾಥ್, ಎಸ್.ವಿ.ಸುನಿಲ್, ಭರತ್ ಚೆಟ್ರಿ ಹಾಗೂ ಇಗ್ನೇಸ್ ಟರ್ಕಿ ಅವರಿಗೆ ರಾಜ್ಯ ಸರ್ಕಾರ ತಲಾ 10 ಲಕ್ಷ ರೂಪಾಯಿ ನೀಡಿ ಸನ್ಮಾನಿಸಿತು.
ಸೋಮವಾರ ಮಧ್ಯಾಹ್ನ ನಡೆದ ಪುಟ್ಟ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸಾಧಕ ಆಟಗಾರರಿಗೆ ಚೆಕ್ ನೀಡಿ ಅಭಿನಂದಿಸಿದರು. 2011ರ ಸೆಪ್ಟೆಂಬರ್ನಲ್ಲಿ ಚೀನಾದಲ್ಲಿ ನಡೆದ ಚೊಚ್ಚಲ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಗೆದ್ದಿತ್ತು. ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಗೆದ್ದು ಲಂಡನ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿತ್ತು.
ಒಲಿಂಪಿಕ್ಸ್ ಅರ್ಹತಾ ಟೂರ್ನಿ ವೇಳೆ ತಂಡದಲ್ಲಿದ್ದ ರಾಜ್ಯದ ಎಸ್.ಕೆ.ಉತ್ತಪ್ಪ (5 ಲಕ್ಷ ರೂ.) ಹಾಗೂ ಕಾಯ್ದಿರಿಸಿದ ಆಟಗಾರ ವಿ.ಎಸ್.ವಿನಯ್ (1 ಲಕ್ಷ) ಅವರನ್ನೂ ಅಭಿನಂದಿಸಲಾಯಿತು.
ತಂಡದ ಗೋಲ್ಕೀಪಿಂಗ್ ಕೋಚ್ ಎ.ಬಿ.ಸುಬ್ಬಯ್ಯ, ಸಹಾಯಕ ಕೋಚ್ಗಳಾದ ಬಿ.ಜೆ.ಕಾರ್ಯಪ್ಪ ಹಾಗೂ ಗಂಗಾಧರ್ ತಪಶೆಟ್ಟಿಗೆ ತಲಾ ಒಂದು ಲಕ್ಷ ರೂ. ನೀಡಲಾಯಿತು.