ಬೆಂಗಳೂರು: ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸಿ ಕೆ.ಆರ್.ಮಾರುಕಟ್ಟೆ ಕಟ್ಟಡದ ಸುತ್ತಲೂ ಅಗ್ನಿಶಾಮಕ ವಾಹನದ ಸುಗಮ ಸಂಚಾರಕ್ಕೆ ಬಿಬಿಎಂಪಿ ಅನುವು ಮಾಡಿಕೊಟ್ಟಿದೆ. ಆದರೆ, ಇಲ್ಲಿಗೆ ಸಮೀಪದ ‘ಕೋಟೆ’ ಪ್ರದೇಶದ ಪರಿಸ್ಥಿತಿ ಮಾತ್ರ ಈಗಲೂ ಹಾಗೆಯೇ ಇದೆ.
ವಿಕ್ಟೋರಿಯಾ ಆಸ್ಪತ್ರೆ ಕಡೆಯಿಂದ ಕೆ.ಆರ್.ಮಾರುಕಟ್ಟೆ ಕಡೆಗೆ ಬರುವ ರಸ್ತೆ ಹಾಗೂ ಕೋಟೆ ನಡುವಿನ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಹತ್ತಾರು ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ಪರಿಸರದಲ್ಲಿ ತಳ್ಳುಗಾಡಿಯವರೂ ರಸ್ತೆಯಲ್ಲೇ ಸಂಚರಿಸಿಕೊಂಡು ವ್ಯಾಪಾರ ನಡೆಸುತ್ತಿರುತ್ತಾರೆ. ಸದಾ ಜನರಿಂದ ಹಾಗೂ ವಾಹನ ದಟ್ಟಣೆಯಿಂದ ಗಿಜಿಗುಡುವ ಈ ಪ್ರದೇಶ ಕಿಷ್ಕಿಂದೆಯಂತಾಗಿದೆ.
‘ಇಲ್ಲಿ ಆಂಬುಲೆನ್ಸ್ ವಾಹನಗಳು ಸಾಗುವುದಕ್ಕೂ ಜಾಗವಿಲ್ಲದ ಪರಿಸ್ಥಿತಿ ಇದೆ. ಜನರು ನಡೆದುಕೊಂಡು ಹೋಗಲು ಜಾಗವೇ ಇರುವುದಿಲ್ಲ. ಇಲ್ಲಿನ ಸಿಗ್ನಲ್ಗಳ ಬಳಿ ನಿಮಿಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ವಿಕ್ಟೋರಿಯಾ ಆಸ್ಪತ್ರೆ ಬಳಿ ಬಸ್ ನಿಲ್ಲಿಸುವ ಜಾಗದಲ್ಲಿ ಪ್ರಯಾಣಿಕರ ತಂಗುದಾಣವೂ ಇಲ್ಲ’ ಎಂದು ಸುರೇಶ್ ದೂರಿದರು.
‘ನೂರಾರು ವರ್ಷ ಹಳೆಯದಾದ ಕೋಟೆ ಪಾರಂಪರಿಕ ತಾಣವೂ ಹೌದು. ಅದರ ಸಹಜ ಸೌಂದರ್ಯಕ್ಕೂ ಧಕ್ಕೆ ಉಂಟಾಗುತ್ತಿದೆ, ಹಾಗಾಗಿ, ಕೆ.ಆರ್.ಮಾರುಕಟ್ಟೆ ಪ್ರದೇಶದ ಒತ್ತುವರಿ ತೆರವುಗೊಳಿಸಿದಂತೆಯೇ ಕೋಟೆ ಪಕ್ಕದ ಒತ್ತುವರಿಯನ್ನೂ ಪಾಲಿಕೆ ತೆರವುಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.