ಕೆ.ಆರ್.ಪುರ: ಹೆಣ್ಣೂರು ಸಮೀಪದ ಮಾರುತಿ ಬಡಾವಣೆಯ ಎಚ್ಎಂಆರ್ ಅಂತರರಾಷ್ಟ್ರೀಯ ಶಾಲೆಯಲ್ಲಿ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ಹಾಗೂ ಪದವಿ ಪ್ರದಾನ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಶಾಲೆಯ ಕಾರ್ಯನಿರ್ವಾಹಕ ಅಧಿಕಾರಿ ರಮ್ಯಾ ರಮೇಶ್ ಕಾರ್ಯಕ್ರಮ ಉದ್ಘಾಟಿಸಿ, ‘ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಈಗಿನಿಂದಲೇ ಉತ್ತಮವಾಗಿ ಅಭ್ಯಾಸ ಮಾಡಿ ಸ್ಪರ್ಧಾತ್ಮಕ ಯುಗಕ್ಕೆ ಅಣಿಯಾಗಬೇಕು. ಮಕ್ಕಳು ಪಠ್ಯದ ಜೊತೆಗೆ ಹೊರ ಜಗತ್ತಿನ ಆಗುಹೋಗುಗಳ ಬೆಳೆವಣಿಗೆಗಳ ಬಗ್ಗೆ ತಿಳಿದುಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಯಶಸ್ಸು ಸಾಧಿಸಬಹುದು’ ಎಂದರು.
ಶಾಲೆಯ ಶೈಕ್ಷಣಿಕ ಸಲಹೆಗಾರ್ತಿ, ನಂದಿನಿ ನಾಗರಾಜ್, ಮಕ್ಕಳು ತಮ್ಮ ಭವಿಷ್ಯದ ಮುನ್ನುಡಿಯನ್ನು ತಾವೇ ಬರೆಯಬೇಕಿದೆ. ಹತ್ತನೇ ತರಗತಿ ನಂತರ ವಿವಿಧ ಕಾಲೇಜುಗಳಲ್ಲಿ ಅನೇಕ ರೀತಿಯ ಕೋರ್ಸ್ಗಳು ಲಭ್ಯ ಇವೆ. ಅವುಗಳಲ್ಲಿ ಪೋಷಕರ ಸಲಹೆಯೊಂದಿಗೆ ಉತ್ತಮವಾದುದನ್ನು ಆಯ್ಕೆ ಮಾಡಿಕೊಂಡು ಪರಿಣತಿ ಸಾಧಿಸಿ’ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ಶಾಲಾ ವಾರ್ಷಿಕ ವಾರ್ತಾ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಪ್ರಾಂಶುಪಾಲರಾದ ಹೇಮಾ ನಾಗರಾಜನ್ ಇದ್ದರು.