ಬೆಂಗಳೂರು: ‘ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮಲಗುಂಡಿಗಳನ್ನು ರೋಬೊಗಳ ಮೂಲಕ ಸ್ವಚ್ಛಗೊಳಿಸುತ್ತಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಏಕೆ ರೋಬೊ ಪರಿಚಯಿಸಿಲ್ಲ’ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ ಹೀರೇಮನಿ ಪ್ರಶ್ನಿಸಿದರು.
ಜಿಲ್ಲಾಡಳಿತ ಬುಧವಾರ ಆಯೋಜಿಸಿದ್ದ ‘ಮ್ಯಾನ್ಹೋಲ್ ಸಾವುಗಳನ್ನು ತಡೆಯುವ ಕ್ರಮ ಹಾಗೂ ಪುನರ್ವಸತಿ’ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಸರ್ಕಾರ ಮತ್ತು ಬಿಬಿಎಂಪಿಗೆ ರೋಬೊಗಳನ್ನು ಬಳಸುವಂತೆ ತಿಂಗಳ ಹಿಂದೆಯೇ ಪತ್ರ ಬರೆದಿದ್ದೇನೆ. ಆದರೆ, ಪ್ರಯೋಜನವಾಗಿಲ್ಲ. ಮಲಗುಂಡಿ ಸ್ವಚ್ಛತೆಗೆ ಯಂತ್ರಗಳಿದ್ದರೂ ಉಪಯೋಗಿಸುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಾರ್ಮಿಕರು ಬಲಿಯಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕಾರ್ಮಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಾತನಾಡಲು ಕಚೇರಿಗೆ ಭೇಟಿ ಕೊಟ್ಟರೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಒಂದು ದಿನವೂ ಸಿಗುವುದಿಲ್ಲ. ಇವತ್ತೂ ಕಾರ್ಯಕ್ರಮಕ್ಕೆ ಬಂದಿಲ್ಲ’ ಎಂದು ಆಯೋಗದ ಸದಸ್ಯ ಸಿ.ಎನ್.ಆನಂದ್ ಸಿಟ್ಟಿನಿಂದ ಹೇಳಿದರು.
‘ಮಲದಗುಂಡಿಗೆ ಇಳಿಸಿ ಕೆಲಸ ಮಾಡಿಸುವ ಅಧಿಕಾರಿಗಳಿಗೆ ಆರು ತಿಂಗಳ ಜಾಮೀನುರಹಿತ ಜೈಲು ಶಿಕ್ಷೆ ಇದೆ. ಇಲ್ಲಿಯವರೆಗೂ 71 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಅದಕ್ಕೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆ ಆಗಿದೆಯೇ’ ಎಂದು ಪ್ರಶ್ನಿಸಿದರು.