ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಎಸಿಪಿ ಅಪಘಾತ ಪ್ರಕರಣ: ಟ್ರಕ್‌ ಚಾಲಕನ ಬಂಧನ 

Last Updated 1 ಆಗಸ್ಟ್ 2020, 10:45 IST
ಅಕ್ಷರ ಗಾತ್ರ

ನವದೆಹಲಿ: ನೈರುತ್ಯ ದೆಹಲಿಯ ರಾಜೋಕ್ರಿ ಪ್ರದೇಶದಲ್ಲಿ ನಡೆದಿದ್ದ ಕರ್ತವ್ಯನಿರತ ಸಹಾಯಕ ಪೊಲೀಸ್ ಕಮಿಷನರ್‌ (ಎಸಿಪಿ) ಅವರ ಅಪಘಾತ ಪ್ರಕರಣ ಸಂಬಂಧ 28 ವರ್ಷದ ಟ್ರಕ್‌ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಹಿಪಾಲ್ಪುರ‌ ನಿವಾಸಿ ಅಮಿತ್‌ ಪುಲಾಮಿ ಎಂದು ಗುರುತಿಸಲಾಗಿದೆ.

‘ಜುಲೈ 25ರ ಸಂಜೆ ರಾಜೋಕ್ರಿ ಫ್ಲೈಓವರ್‌ ಬಳಿ ಎನ್‌ಎಚ್‌–8ರಲ್ಲಿ ಅಪಘಾತ ಸಂಭವಿಸಿದ್ದು, ಎಸಿಪಿ (ಸಂಚಾರ) ಸಂಕೇತ್‌ಕುಮಾರ್‌ಕೌಶಿಕ್‌(58) ಅವರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದರು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸರು, ದೆಹಲಿ-ಹರಿಯಾಣ ಗಡಿಪ್ರದೇಶ, ಎನ್ಎಚ್‌-8 ರಲ್ಲಿರುವ ಎಂಸಿಡಿ ಟೋಲ್‌ ಮೂಲಕ ಹಾದುಹೋದ ಎಲ್ಲಾ ಮಿನಿ ಟ್ರಕ್‌ಗಳ ವಿವರಗಳನ್ನು ಸಂಗ್ರಹಿಸಿದ್ದರು.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ಶಂಕಿತ ವಾಹನವೊಂದು ದೆಹಲಿಯ ರಂಗ್‌ಪುರಿಯಿಂದ ಗುರ್ಗಾಂವ್‌ ಕಡೆಗೆ ಸರ್ವಿಸ್‌ ರಸ್ತೆ ಮೂಲಕ ಬಂದು ರಾಜೋಕ್ರಿ ಫ್ಲೈಓವರ್‌ ಅಡಿಯಲ್ಲಿ ಯುಟರ್ನ್‌ ತೆಗೆದುಕೊಂಡು ಅಪಘಾತ ಸ್ಥಳದತ್ತ ಸಾಗಿರುವುದು ಗಮನಕ್ಕೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸದ್ಯ ಮಹಿಪಾಲ್ಪುರದ ರಂಗ್ಪುರಿಯಲ್ಲಿ ವಾಹನವನ್ನು ಪತ್ತೆಹಚ್ಚಲಾಗಿದ್ದು, ಚಾಲಕನನ್ನು ಬಂಧಿಸಲಾಗಿದೆ’ ಎಂದು ಉಪ ಪೊಲೀಸ್‌ ಆಯುಕ್ತ (ನೈರುತ್ಯ) ದೇವೇಂದರ್‌ ಆರ್ಯ ಹೇಳಿದ್ದಾರೆ.

ಜುಲೈ 25 ರಂದು ಸಂಜೆ 7.45 ರ ಸುಮಾರಿಗೆ ಮಹಿಪಾಲ್‌ಪುರದ ರಂಗ್‌ಪುರಿಯಲ್ಲಿರುವ ತನ್ನ ಗೋದಾಮಿನಿಂದ ಐಜಿಐ ಕಾರ್ಗೋ ಟರ್ಮಿನಲ್‌ ಕಡೆಗೆ ಹೋಗುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಎಸಿಪಿಗೆ ಡಿಕ್ಕಿ ಹೊಡೆದಿದ್ದೇನೆ ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT