ನವದೆಹಲಿ:ದೇವರ ಹೆಸರಿನಲ್ಲಿ ಪ್ರಾಣಿ ಅಥವಾ ಪಕ್ಷಿ ಬಲಿ ನೀಡುವುದನ್ನು ನಿಷೇಧಿಸಲುಜಾರಿಗೊಳಿಸಿದ್ದ ಕಾಯ್ದೆ ಕುರಿತು ಪ್ರತಿಕ್ರಿಯೆ ದಾಖಲಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಕೇರಳ ಸರ್ಕಾರಕ್ಕೆ ಸೂಚಿಸಿದೆ.
ಹಿಂದೆ ಕಾಯ್ದೆಯ ಸಿಂಧುತ್ವವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಪಿ.ಇ.ಗೋಪಾಲಕೃಷ್ಣನ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಪೀಠ ಈ ಸಂಬಂಧ ಕೇರಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು.
'ಪ್ರಾಣಿ ಬಲಿಯು ಧಾರ್ಮಿಕ ಆಚರಣೆಯ ಆಂತರಿಕಭಾಗವಾಗಿದೆ' ಎಂದು ಅರ್ಜಿದಾರರು ವಾದಿಸಿದ್ದರು.ಹೈಕೋರ್ಟ್ ಆದೇಶವು ವ್ಯಕ್ತಿಯ ಮೂಲಭೂತ ಹಕ್ಕಿನ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ಧಾರ್ಮಿಕ ಆಚರಣೆಯಲ್ಲಿಪ್ರಾಣಿ ಅಥವಾ ಪಕ್ಷಿ ಬಲಿ ನೀಡುವುದು ಅಗತ್ಯ ಎಂಬುದನ್ನು ಸಾಬೀತುಪಡಿಸಲು ಯಾವುದೇ ಆಧಾರಗಳನ್ನು ಒದಗಿಸಿಲ್ಲ ಎಂದು ಹೇಳಿದ್ದ ಕೇರಳ ಹೈಕೋರ್ಟ್, ಕಾಯ್ದೆಯ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಯನ್ನು ಜೂನ್ 16 ರಂದು ವಜಾಗೊಳಿಸಿತ್ತು.